ಮಣಿಶಂಕರ್ ಅಯ್ಯರ್ ಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದೆ ಎಂದ ಉದ್ಧವ್ ಠಾಕ್ರೆ
ದ್ವಿರಾಷ್ಟ್ರ ಸಿದ್ಧಾಂತ ಜಿನ್ನಾಗಿಂತ ಮೊದಲು ಪ್ರತಿಪಾದಿಸಿದ್ದು ಸಾವರ್ಕರ್ ಎಂಬ ಹೇಳಿಕೆಗೆ ಪ್ರತಿಕ್ರಿಯೆ
ಮುಂಬೈ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, "ವಿನಾಯಕ್ ದಾಮೋದರ್ ಸಾವರ್ಕರ್ ಅವರಂತಹ ನಾಯಕರನ್ನು ಗೌರವಿಸದೇ ಇರುವುದಕ್ಕೆ ಅಯ್ಯರ್ ಅವರಿಗೆ ಚಪ್ಪಲಿಯಿಂದ ಹೊಡೆಯಬೇಕು,'' ಎಂದಿದ್ದಾರೆ.
ಸಾವರ್ಕರ್ ಅವರ ಜೀವನಾಧರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಠಾಕ್ರೆ, 2018ರಲ್ಲಿ ಅಯ್ಯರ್ ಅವರು ಸಾವರ್ಕರ್ ಕುರಿತಂತೆ ನೀಡಿರುವ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಸಾವರ್ಕರ್ ವಿರುದ್ಧ ಅಯ್ಯರ್ ಹೇಳಿಕೆ ನೀಡುವಾಗ ಅವರೆದುರು ನಾನಿರುತ್ತಿದ್ದರೆ ಅವರಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದೆ,'' ಎಂದು ಉದ್ಧವ್ ಹೇಳಿದರು.
"ಸಾವರ್ಕರ್ ಅವರು ಹಿಂದುತ್ವ ಪದವನ್ನು ಅನ್ವೇಷಿಸಿದ್ದರು ಎಂದು 2018ರಲ್ಲಿ ಹೇಳಿದ್ದ ಅಯ್ಯರ್, ದ್ವಿರಾಷ್ಟ್ರ ಸಿದ್ಧಾಂತವನ್ನು ಮೊಹಮ್ಮದ್ ಅಲಿ ಜಿನ್ನಾಗಿಂತ ಮೊದಲು ಪ್ರತಿಪಾದಿಸಿದ್ದು ಸಾವರ್ಕರ್ ಎಂದೂ ಆರೋಪಿಸಿದ್ದರು.
ದಿಲ್ಲಿ ವಿವಿಯ ಉತ್ತರ ಕ್ಯಾಂಪಸ್ಸಿನಲ್ಲಿದ್ದ ವೀರ್ ಸಾವರ್ಕರ್ ಪುತ್ಥಳಿಗೆ ಹಾನಿಗೈದ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಠಾಕ್ರೆ, ಇಂತಹ ಕೃತ್ಯದಲ್ಲಿ ತೊಡಗಿದವರನ್ನು ಸಾರ್ವಜನಿಕವಾಗಿ ಥಳಿಸಿದಾಗ ಮಾತ್ರ ಅವರಿಗೆ ಸ್ವಾತಂತ್ರ್ಯದ ಮಹತ್ವದ ಅರಿವಾಗುತ್ತದೆ ಎಂದರು.
ರಾಹುಲ್ ಗಾಂಧಿ ಈಗಲೂ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಹೇಳಿದ ಉದ್ಧವ್, "ಅವರು ಎಲ್ಲದ್ದಕ್ಕಿಂತ ಮೊದಲು ದೇಶವನ್ನು ಅರಿಯಲು ಪ್ರಯತ್ನಿಸಬೇಕು,'' ಎಂದರು.