ಸಿಜೆಐ ವಿರುದ್ಧ ಕಿರುಕುಳ ಆರೋಪ ಹೊರಿಸಿದ್ದ ಮಹಿಳೆಯ ವಿರುದ್ಧದ ವಂಚನೆ ಪ್ರಕರಣ ಮುಕ್ತಾಯ
ಹೊಸದಿಲ್ಲಿ, ಸೆ.19: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಸುಪ್ರೀಂಕೋರ್ಟಿನ ಮಾಜಿ ಉದ್ಯೋಗಿ ಮಹಿಳೆಯ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ಕುರಿತಂತೆ ದಿಲ್ಲಿ ಪೊಲೀಸರು ಮುಕ್ತಾಯ ವರದಿ ಸಲ್ಲಿಸಿದ ಎರಡು ವಾರಗಳಲ್ಲಿ ದಿಲ್ಲಿ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.
ಮಹಿಳೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದು ತಮಗೆ ಬೇಕಿಲ್ಲ ಎಂದು ದೂರುದಾರ ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ. ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿಯನ್ನು ಸ್ವೀಕರಿಸಿದ್ದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ದೂರುದಾರ ನವೀನ್ ಕುಮಾರ್ ಅವರಿಗೆ ಹಾಜರಾಗುವಂತೆ ಸೂಚಿಸಿದ್ದರು. ಕೋರ್ಟ್ ಆದೇಶದಲ್ಲಿ ತಿಳಿಸಲಾದಂತೆ ಸೆಪ್ಟೆಂಬರ್ 16ರಂದು ಹಾಜರಾದ ಕುಮಾರ್, ತಮಗೆ ಪೊಲೀಸರು ನಡೆಸಿದ ತನಿಖೆಯಿಂದ ಸಮಾಧಾನವಾಗಿದೆ ಎಂದು ನ್ಯಾಯಾಧೀಶರೆದುರು ಹೇಳಿದ್ದಾರೆ.
“ಪ್ರಕರಣವನ್ನು ಮುಂದುವರಿಸಿಕೊಂಡು ಹೋಗುವುದು ತಮಗೆ ಬೇಕಿಲ್ಲ ಎಂದು ಅವರು ಹೇಳಿದ್ದೇ ಅಲ್ಲದೆ ಮುಕ್ತಾಯ ವರದಿ ಪ್ರಶ್ನಿಸಿ ಅರ್ಜಿ ಸಲ್ಲಿಸುವುದಿಲ್ಲ ಎಂದೂ ಹೇಳಿದರು'' ಎಂದು ನ್ಯಾಯಾಲಯ ತಿಳಿಸಿದೆ.
ಮಾರ್ಚ್ 10ರಂದು ಈ ಪ್ರಕರಣ ಸಂಬಂಧ ಮಹಿಳೆಯನ್ನು ಬಂಧಿಸಿ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಎರಡು ದಿನಗಳ ನಂತರ ಆಕೆಗೆ ಜಾಮೀನು ನೀಡಲಾಗಿತ್ತು ಹಾಗೂ ತನಿಖೆಯನ್ನು ಕ್ರೈಂ ಬ್ರ್ಯಾಂಚ್ಗೆ ವಹಿಸಲಾಗಿತ್ತು.