ಗುರು ನಾನಕ್ ಜನ್ಮದಿನಾಚರಣೆಗೆ ಪಾಕಿಸ್ತಾನದ ಕರ್ತಾರ್ಪುರ್ ಗುರುದ್ವಾರಕ್ಕೆ ಭೇಟಿ ನೀಡಲಿರುವ ಮನಮೋಹನ್ ಸಿಂಗ್
ಹೊಸದಿಲ್ಲಿ : ಸಿಖ್ ಸಮುದಾಯದ ಪರಮೋಚ್ಛ ಧಾರ್ಮಿಕ ನಾಯಕ ಗುರು ನಾನಕ್ ಅವರ ಜನ್ಮದಿನಾಚರಣೆಗಾಗಿ ಪಾಕಿಸ್ತಾನದಲ್ಲಿರುವ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಕ್ಯಾಫ್ಟನ್ ಅಮರೀಂದರ್ ಸಿಂಗ್ ನೀಡಿರುವ ಆಹ್ವಾನವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ವೀಕರಿಸಿದ್ದಾರೆ. ಅಮರೀಂದರ್ ಸಿಂಗ್ ಇಂದು ಬೆಳಿಗ್ಗೆ ಮನಮೋಹನ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತನಾಡಿದರು. ಗುರುದ್ವಾರಕ್ಕೆ ಸರ್ವಪಕ್ಷ ನಿಯೋಗ ನವೆಂಬರ್ 9ರಂದು ಭೇಟಿ ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆವರಿಗೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ಅಮರೀಂದರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ನವೆಂಬರ್ 12ರಂದು ಸುಲ್ತಾನಪುರ್ ಲೋಧಿಯಲ್ಲಿ ನಡೆಯಲಿರುವ ಗುರುನಾನಕ್ ಅವರ 550ನೇ ಜನ್ಮದಿನಾಚರಣೆ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಗೆ ಆಹ್ವಾನಿಸಲಾಗುವುದೆಂದು ಕಳೆದ ವಾರ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಹೇಳಿದ್ದರೂ ಪಾಕಿಸ್ತಾನದ ಯಾವುದೇ ಆಹ್ವಾನವನ್ನು ಸಿಂಗ್ ತಿರಸ್ಕರಿಸುವುದಾಗಿ ಅವರ ಕಚೇರಿ ತಿಳಿಸಿತ್ತು.