ಚಿದಂಬರಂ ಜಾಮೀನು ಅರ್ಜಿಗೆ ಉತ್ತರಿಸುವಂತೆ ಸಿಬಿಐಗೆ ಸರ್ವೋಚ್ಚ ನ್ಯಾಯಾಲಯದ ನೋಟಿಸ್
ಐಎನ್ಎಕ್ಸ್ ಮೀಡಿಯಾ ಪ್ರಕರಣ
ಹೊಸದಿಲ್ಲಿ,ಅ.4: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಸಿಬಿಐಗೆ ನೋಟಿಸನ್ನು ಹೊರಡಿಸಿದೆ. ಸದ್ಯ ತಿಹಾರ ಜೈಲಿನಲ್ಲಿರುವ ಚಿದಂಬರಂ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅ.15ಕ್ಕೆ ನಿಗದಿಗೊಳಿಸಿದೆ.
ಅರ್ಜಿಯು ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದೆ. ಜಾರಿ ನಿರ್ದೇಶನಾಲಯ (ಈ.ಡಿ)ದ ಪ್ರಕರಣವೇನಾಯ್ತು ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಅವರು,ಈ.ಡಿ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಕಕ್ಷಿದಾರರನ್ನು ಬಂಧಿಸಿಲ್ಲ ಎಂದು ತಿಳಿಸಿದರು.
ಆ.21ರಂದು ಬಂಧಿಸಲ್ಪಟ್ಟಾಗಿನಿಂದಲೂ ಸಿಬಿಐ ವಶದಲ್ಲಿದ್ದ ಚಿದಂಬರಂ ಅವರು ಸೆ.5ರಿಂದ ತಿಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆ.19ರಂದು ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅ.3ರವರೆಗೆ ವಿಸ್ತರಿಸಿದ್ದ ದಿಲ್ಲಿಯ ವಿಶೇಷ ನ್ಯಾಯಾಲಯವು ಬಳಿಕ ಅ.17ರವರೆಗೆ ಮತ್ತೆ ವಿಸ್ತರಿಸಿದೆ.