ಆರೆ ಕಾಲನಿ ಮರಗಳಿಗಿರುವ ಹಕ್ಕು ಕಾಶ್ಮೀರಿಗಳಿಗೆ ಏಕಿಲ್ಲ: ಮೆಹಬೂಬಾ ಮುಫ್ತಿ ಪ್ರಶ್ನೆ
ಹೊಸದಿಲ್ಲಿ, ಅ.7: 'ಮುಂಬೈಯ ಆರೆ ಕಾಲನಿಯಲ್ಲಿನ ಮರಗಳು ಕಾಶ್ಮೀರಿಗಳ ಜೀವಕ್ಕಿಂತಲೂ ಮಿಗಿಲು' ಎಂದು ಗೃಹಬಂಧನದಲ್ಲಿರುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಮುಂಬೈಯಲ್ಲಿ ಮೆಟ್ರೋ ಕಾರು ಪಾರ್ಕಿಂಗ್ ಯೋಜನೆಗಾಗಿ ಆರೆ ಕಾಲನಿ ಮರಗಳನ್ನು ಕಡಿಯುವುದರ ಮೇಲೆ ನಿರ್ಬಂಧ ವಿಧಿಸಿ ಸುಪ್ರೀಂ ಕೋರ್ಟ್ ಇಂದು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡಂದಿನಿಂದ ಗೃಹ ಬಂಧನದಲ್ಲಿರುವ ಮೆಹಬೂಬಾ ಅವರ ಈ ಪ್ರತಿಕ್ರಿಯೆ ಬಂದಿದೆ. ಮೆಹಬೂಬಾ ಅವರ ಟ್ವಿಟರ್ ಖಾತೆಯನ್ನು ಅವರ ಪುತ್ರಿ ಇಲ್ತಿಝಾ ನಿಭಾಯಿಸುತ್ತಿದ್ದಾರೆ.
"ಮುಂಬೈಯಲ್ಲಿ ಪರಿಸರ ಹೋರಾಟಗಾರರು ಆರೆ ಮರ ಕಡಿತ ನಿಲ್ಲಿಸಿದ್ದಕ್ಕೆ ಖುಷಿಯಾಗಿದೆ ಇದೇ ಹಕ್ಕುಗಳು ಕಾಶ್ಮೀರಿಗಳಿಗೇಕಿಲ್ಲ?" ಎಂದೂ ಮೆಹಬೂಬಾ ಪ್ರಶ್ನಿಸಿದ್ದಾರೆ.
"ಕಾಶ್ಮೀರಿಗಳಿಗೂ ಅದೇ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಏಕೆ ನಿರಾಕರಿಸಲಾಗಿದೆ ?, ಭಾರತದ ಇತೆರೆಡೆಗಳ ನಾಗರಿಕರಿಗೂ ಅವರಿಗೂ ಸಮಾನ ಹಕ್ಕುಗಳಿವೆಯೆಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವವಾಗಿ ಅವರ ಮೂಲಭೂತ ಹಕ್ಕುಗಳನ್ನೂ ಕಸಿಯಲಾಗಿದೆ'' ಎಂದು ಮೆಹಬೂಬಾ ಹೇಳಿದ್ದಾರೆ.