ಚುನಾವಣಾ ಪ್ರಚಾರ ನಿರತ ಶಿವಸೇನೆ ಸಂಸದನಿಗೆ ಚೂರಿ ಇರಿತ
ಮುಂಬೈ, ಅ.16: ಒಸ್ಮಾನಾಬಾದ್ನ ಶಿವಸೇನೆಯ ಸಂಸದ ಓಂಪ್ರಕಾಶ್ ನಿಂಬಾಳ್ಕರ್ ಮೇಲೆ ಯುವಕನೊಬ್ಬ ಚೂರಿಯಿಂದ ಇರಿದ ಘಟನೆ ಬುಧವಾರ ನಡೆದಿದೆ. ಅದೃಷ್ಟವಶಾತ್ ನಿಂಬಾಳ್ಕರ್ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.
ನೈಗಾಂವ್ ಪಡೋಲಿ ಹಳ್ಳಿಯ ಸಮೀಪ ನಿಂಬಾಳ್ಕರ್ ಕೈ ಕುಲುಕಿದ 20ರ ವಯಸ್ಸಿನ ಯುವಕ ಚೂರಿಯಿಂದ ದಾಳಿ ನಡೆಸಲು ಯತ್ನಿಸಿದ್ದಾನೆ. ನಿಂಬಾಳ್ಕರ್ಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಆರೋಪಿ ಯುವಕನನ್ನು ಬಂಧಿಸಲಾಯಿತು. ಆದರೆ ಆತ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ.
ಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಾರಿನಿಂದ ಇಳಿದ ನಿಂಬಾಳ್ಕರ್ ಮೇಲೆ ಅಜಿಂಕ್ಯ ಟೆಕಾಲೆ ಎಂಬ ಯುವಕ ಚೂರಿಯಿಂದ ಇರಿದಿದ್ದಾನೆ. ಚೂರಿ ಕೈಯಲ್ಲಿರುವ ವಾಚ್ಗೆ ತಾಗಿದ ಕಾರಣ ಸಂಸದರು ಗಂಭೀರ ಗಾಯದಿಂದ ಪಾರಾಗಿದ್ದಾರೆ. ಘಟನೆಯ ವೇಳೆ ನಿಂಬಾಳ್ಕರ್ ಜೊತೆ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶಿವಸೇನೆ ಅಭ್ಯರ್ಥಿ ಕೈಲಾಶ್ ಪಾಟೀಲ್ ಹಾಗೂ ಸಂಸದರ ಅಂಗರಕ್ಷಕರು ಇದ್ದರು.
Next Story