ನೇಮಕಾತಿಗಳ ಮೂಲಕ ನ್ಯಾಯಾಂಗ ಸ್ವಾತಂತ್ರ್ಯವನ್ನು ಹೊಸಕಿ ಹಾಕುತ್ತಿರುವ ಸರಕಾರ
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಆರೋಪ
ಹೊಸದಿಲ್ಲಿ, ಅ.16: ಸರಕಾರಕ್ಕೆ ನ್ಯಾಯಾಧೀಶರ ನೇಮಕಾತಿ ಮೇಲೆ ಹೆಚ್ಚಿನ ಹಿಡಿತ ನೀಡುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂ ಕೋರ್ಟ್ 'ಅಸಾಂವಿಧಾನಿಕ' ಎಂದು ರದ್ದುಗೊಳಿಸಿರುವ ಹೊರತಾಗಿಯೂ ಕೇಂದ್ರದ ನಡೆಯಿಂದಾಗಿ ಅದು ಇನ್ನೂ ಕಾರ್ಯಾಚರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಮದನ್ ಲೋಕೂರ್ ಹೇಳಿದ್ದಾರೆ. ಸರಕಾರ ನೇಮಕಾತಿಗಳ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಹೊಸಕಿ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
'ಇಂಡಿಯನ್ ಎಕ್ಸ್ ಪ್ರೆಸ್' ಪತ್ರಿಕೆಯಲ್ಲಿ ತಮ್ಮ ಲೇಖನದಲ್ಲಿ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಹಲವು ಶಿಫಾರಸುಗಳನ್ನು ಸರಕಾರ ತಿರಸ್ಕರಿಸಿದ್ದನ್ನು ಉಲ್ಲೇಖಿಸಿದ್ದಾರೆ.
"ಶಿಫಾರಸನ್ನು ತಿರಸ್ಕರಿಸಿದ್ದಕ್ಕೆ ಸೂಚಿಸಲಾದ ಕಾರಣಗಳು ತಿಳಿದಿಲ್ಲ ಹಾಗೂ ಅವುಗಳನ್ನು ನ್ಯಾಯಾಂಗದ ಹಿತಾಸಕ್ತಿಯಿಂದ ಬಹಿರಂಗಪಡಿಸಬೇಕು. ಒಬ್ಬ ನ್ಯಾಯಾಧೀಶರು ಆಂಧ್ರ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಲು ಅಸೂಕ್ತವೆಂದಾದರೆ ಅವರು ಗುಜರಾತ್ ಗೆ ಹೇಗೆ ಸೂಕ್ತವಾಗುತ್ತಾರೆ?'' ಎಂದು ಲೋಕೂರ್ ತಮ್ಮ ಲೇಖನದಲ್ಲಿ ಪ್ರಶ್ನಿಸಿದ್ದಾರೆ.
ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿ ಕೆ ತಾಹಿಲ್ ರಮಣಿ ಅವರನ್ನು ಮೇಘಾಲಯ ಹೈಕೋರ್ಟಿಗೆ ವರ್ಗಾಯಿಸಿರುವ ವಿಚಾರವನ್ನೂ ಜಸ್ಟಿಸ್ ಲೋಕೂರ್ ಪ್ರಸ್ತಾಪಿಸಿದ್ದಾರೆ.