ಆರ್ಥಿಕ ನಿಧಾನಗತಿ ನಿರ್ಲಕ್ಷಿಸುತ್ತಿರುವ ಪ್ರಧಾನಿ: ಯೆಚೂರಿ
ಹೊಸದಿಲ್ಲಿ, ಅ. 18: ಗ್ರಾಮೀಣ ಗೃಹ ಉಪಭೋಗ ಕಳೆದ ಏಳು ವರ್ಷಗಳಲ್ಲೇ ಅತಿ ಕೆಳ ಮಟ್ಟಕ್ಕೆ ಕುಸಿದಿದೆ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಶುಕ್ರವಾರ ಹೇಳಿದ್ದಾರೆ.
ಜಡ್ಡುಗಟ್ಟಿದ ಕೇಂದ್ರ ಸರಕಾರ ಶ್ರೀಮಂತ ಸಾಲಗಾರರ ಪಾವತಿಸದ ಸಾಲ ಮನ್ನಾ ಹಾಗೂ ಅತಿ ಶ್ರೀಮಂತರ ತೆರಿಗೆ ಕಡಿತದ ಬಗ್ಗೆ ಉತ್ಸುಕವಾಗಿದೆ. ಆರ್ಥಿಕ ನಿಧಾನಗತಿಯ ಬಗ್ಗೆ ಆಂತಂಕಪಟ್ಟುಕೊಳ್ಳುತ್ತಿಲ್ಲ ಎಂದು ಯೆಚೂರಿ ತಿಳಿಸಿದರು.
ಕೃಷಿ ಬಿಕ್ಕಟ್ಟು ಹಾಗೂ ಗ್ರಾಮೀಣ ಆದಾಯದ ನಿಶ್ಚಲತೆಯ ಚಿಹ್ನೆ ಕಳೆದ ಕೆಲವು ಕಾಲದಿಂದ ಕಂಡು ಬರುತ್ತಿದೆ. ಆದರೆ, ಮೋದಿ ಸರಕಾರ ವಿಭಜನೆ ಹಾಗೂ ಧ್ರುವೀಕರಣದಲ್ಲಿ ಬ್ಯುಸಿ ಆಗಿದೆ ಎಂದರು. ಕೇಂದ್ರ ಸರಕಾರದ ನೀತಿಗಳು ಸಮಾಜ ಎಲ್ಲ ವರ್ಗಗಳಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಅವರು ಹೇಳಿದರು.
ರೈತರು, ಭೂರಹಿತ ಕೂಲಿ ಕಾರ್ಮಿಕರು, ನಗರದಲ್ಲಿರುವ ಕಾರ್ಮಿಕರು, ಯುವಕರು, ಮಹಿಳೆಯರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಟೋಮೊಬೈಲ್, ಜವಳಿ, ಕೈಗಾರಿಕೆ, ಸಣ್ಣ ಉದ್ಯಮ ಹಾಗೂ ಇತರ ವಲಯಗಳಿಂದ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಅವರು ತಿಳಿಸಿದರು. ಮೋದಿ ನೀತಿ ರಾಜಕೀಯದ ನೆರವು ಇರುವ ಶ್ರೀಮಂತರನ್ನು ಹೊರತುಪಡಿಸಿ ಉಳಿದ ವರ್ಗದವರಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಸೀತಾರಾಮ ಯೆಚೂರಿ ಟ್ವೀಟ್ ಮಾಡಿದ್ದಾರೆ.