ಸಾಮಾಜಿಕ ಜಾಲತಾಣಗಳ ಪ್ರೊಫೈಲ್ಗಳಿಗೆ ಆಧಾರ್ ಜೋಡಣೆ: ಹೈಕೋರ್ಟ್ಗಳಲ್ಲಿಯ ಎಲ್ಲ ಪ್ರಕರಣಗಳು ಸುಪ್ರೀಂಕೋರ್ಟ್ ಗೆ
ಹೊಸದಿಲ್ಲಿ,ಅ.22: ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ದೇಶದ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ತನಗೆ ವರ್ಗಾಯಿಸಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಅನುಮತಿ ನೀಡಿತು.
ಸಾಮಾಜಿಕ ಜಾಲತಾಣಗಳ ಕುರಿತು ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ ಬಳಿಕ ಜನವರಿಯಲ್ಲಿ ಈ ವಿಷಯವನ್ನು ವಿಚಾರಣೆಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ದೀಪಕ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು ತಿಳಿಸಿತು. ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಫೇಸ್ಬುಕ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು. ಪ್ರಕರಣಗಳ ವರ್ಗಾವಣೆಯು ಉಚ್ಚ ನ್ಯಾಯಾಲಯಗಳು ಸಂಘರ್ಷದ ತೀರ್ಪುಗಳನ್ನು ನೀಡುವ ಸಾಧ್ಯತೆಯನ್ನು ನಿವಾರಿಸುವ ಮೂಲಕ ನ್ಯಾಯದ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂದು ಫೇಸ್ಬುಕ್ ತನ್ನ ಮನವಿಯಲ್ಲಿ ವಾದಿಸಿತ್ತು.
ತಮಿಳುನಾಡು ಸರಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಫೇಸ್ಬುಕ್ ಮನವಿಗೆ ತನ್ನ ವಿರೋಧವನ್ನು ಕೈಬಿಟ್ಟ ನಂತರ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳಲ್ಲಿಯ ಪ್ರಕರಣಗಳನ್ನು ತನಗೆ ವರ್ಗಾಯಿಸುವಂತೆ ಆದೇಶಿಸಿತು.
ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಎರಡು ಹಾಗೂ ಬಾಂಬೆ ಮತ್ತು ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳಲ್ಲಿ ತಲಾ ಒಂದು ಅರ್ಜಿ ಬಾಕಿಯಿದ್ದು,ಸಾಮಾಜಿಕ ಜಾಲತಾಣಗಳಲ್ಲಿಯ ಖಾತೆಗಳ ದೃಢೀಕರಣಕ್ಕೆ ಆಧಾರ್ ಅಥವಾ ಸರಕಾರದ ಇತರ ಯಾವದೇ ಅಧಿಕೃತ ಗುರುತಿನ ಪುರಾವೆಯನ್ನು ಕಡ್ಡಾಯಗೊಳಿಸಬೇಕು. ಇದರಿಂದ ಕ್ರಿಮಿನಲ್ ಶಕ್ತಿಗಳು ಸಾಮಾಜಿಕ ಜಾಲತಾಣಗಳ ಲಾಭವನ್ನು ಪಡೆಯುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಈ ಎಲ್ಲ ಅರ್ಜಿಗಳು ಕೋರಿವೆ.
‘ಭಯೋತ್ಪಾದಕ ಖಾಸಗಿತನದ ಹಕ್ಕು ಕೋರುವಂತಿಲ್ಲ’
ಕೇಂದ್ರ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ,ಅವರು ಜನರ ಖಾಸಗಿತನವನ್ನು ಅತಿಕ್ರಮಿಸುವುದು ಸರಕಾರದ ನಿಯಮಗಳ ಉದ್ದೇಶವಲ್ಲ,ಆದರೆ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಪ್ರಯತ್ನವಾಗಿದೆ ಎಂದು ಹೇಳಿದರೆ,ಭಯೋತ್ಪಾದಕನೋರ್ವ ಖಾಸಗಿತನಕ್ಕೆ ತನ್ನ ಹಕ್ಕನ್ನು ಮಂಡಿಸುವಂತಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ತಿಳಿಸಿದರು.