ಮಹಾರಾಷ್ಟ್ರದಲ್ಲಿ ಸರಕಾರ ರಚನೆಗಾಗಿ ಶಿವಸೇನೆಗೆ 50:50 ಸೂತ್ರವನ್ನು ಮುಂದಿಟ್ಟ ಎನ್ಸಿಪಿ
ಮುಂಬೈ, ನ.6: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಸರಕಾರ ರಚನೆ ಬಹುತೇಕ ಮುಗಿದ ಅಧ್ಯಾಯವಾಗಿದೆ. ಇದೀಗ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) 50:50 ಸೂತ್ರದಡಿ ಸರ್ಕಾರ ರಚನೆಯ ಬಗ್ಗೆ ಪ್ರಸ್ತಾವನೆಯನ್ನು ಶಿವಸೇನೆಯ ಮುಂದಿಟ್ಟಿದೆ.
ಶಿವಸೇನೆಯ ಅಭ್ಯರ್ಥಿಯೊಬ್ಬರು ಮೊದಲ ಎರಡೂವರೆ ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲಿದ್ದು, ನಂತರ ಎನ್ಸಿಪಿ ಅಭ್ಯರ್ಥಿಯೊಬ್ಬರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗೃಹ, ನಗರಾಭಿವೃದ್ಧಿ, ಕಂದಾಯ, ಹಣಕಾಸು ಮತ್ತು ಲೋಕೋಪಯೋಗಿ ಇಲಾಖೆ ಮತ್ತಿತರರ ಸಚಿವ ಖಾತೆಗಳಲ್ಲಿ ಎನ್ಸಿಪಿ ಸಮಾನ ಖಾತೆ ಹಂಚಿಕೆಯನ್ನು ಎನ್ ಸಿಪಿ ಕೋರಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆಯಡಿಯಲ್ಲಿ, ಕೇಂದ್ರದಲ್ಲಿ ಎನ್ಡಿಎ ಸರ್ಕಾರದೊಂದಿಗಿನ ಮೈತ್ರಿಯನ್ನು ಶಿವಸೇನೆ ಕೈಬಿಡಬೇಕಾಗುತ್ತದೆ ಮತ್ತು ಕೇಂದ್ರ ಸರ್ಕಾರದ ಏಕೈಕ ಸೇನಾ ಮಂತ್ರಿ ಅರವಿಂದ ಸಾವಂತ್ ರಾಜೀನಾಮೆ ನೀಡಬೇಕು ಎಂಬ ಷರತ್ತನ್ನು ಎನ್ಸಿಪಿ ಮುಂದಿಟ್ಟಿದೆ.
ಮೂಲಗಳ ಪ್ರಕಾರ, ಎನ್ಸಿಪಿಯ ಪ್ರಸ್ತಾವನೆಯ ಕುರಿತು ಶಿವಸೇನೆ ಶುಕ್ರವಾರ ವೇಳೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆಎಂದು ಮೂಲಗಳು ತಿಳಿಸಿವೆ.