ಸರಕಾರ ರಚಿಸಲು ನಮಗೆ ಅಮಿತ್ ಶಾ ಅಥವಾ ಫಡ್ನವೀಸ್ ಬೇಕಾಗಿಲ್ಲ: ಉದ್ಧವ್ ಠಾಕ್ರೆ ಕಿಡಿ
ಬಿಜೆಪಿ ವಿರುದ್ಧ ಶಿವಸೇನೆಯ ನಾಯಕನ ವಾಗ್ದಾಳಿ
ಮುಂಬೈ, ನ.8: "ನಾನು ಸುಳ್ಳು ಹೇಳಿದ್ದೇನೆಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ. ನಮಗೆ ಸುಳ್ಳು ಹೇಳಿ ಗೊತ್ತಿಲ್ಲ. ನನ್ನ ಬಳಿ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವಿಸ್ ಬಂದಿದ್ದಾರೆಯೇ ಹೊರತು, ನಾನು ಅವರ ಬಳಿ ಹೋಗಿಲ್ಲ" ಎಂದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಅವರು ನನ್ನ ಬಳಿ ಏನು ಹೇಳಿದ್ದಾರೋ ಅದನ್ನು ಒಪ್ಪಿಕೊಳ್ಳುವವರೆಗೆ ಬಿಜೆಪಿ ಜೊತೆ ಮಾತುಕತೆ ನಡೆಸುವುದಿಲ್ಲ. ನನ್ನನ್ನು ಸುಳ್ಳುಗಾರ ಎಂದವರ ಜೊತೆ ಮಾತನಾಡುವುದಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸರಕಾರ ರಚಿಸುವಂತೆ ನಾನು ಬಿಜೆಪಿಗೆ ಸವಾಲೆಸೆಯುತ್ತಿದ್ದೇನೆ. ಇಲ್ಲದಿದ್ದರೆ ತಮ್ಮದೇ ಸರಕಾರವನ್ನು ರಚಿಸುವ ಹಕ್ಕು ಎಲ್ಲಾ ಪಕ್ಷಗಳಿಗೂ ಇದೆ" ಎಂದವರು ಹೇಳಿದರು.
"ಒಂದು ದಿನ ರಾಜ್ಯದಲ್ಲಿ ಶಿವಸೇನೆಯ ಮುಖ್ಯಮಂತ್ರಿ ಇರಲಿದ್ದಾರೆ ಎಂದು ನಾನು ನನ್ನ ತಂದೆ ಬಾಳಾಸಾಹೇಬ್ ರಿಗೆ ಮಾತು ಕೊಟ್ಟಿದ್ದೆ. ನಾನು ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ಅದಕ್ಕಾಗಿ ನನಗೆ ಅಮಿತ್ ಶಾ ಅಥವಾ ಫಡ್ನವೀಸ್ ಬೇಕಾಗಿಲ್ಲ" ಎಂದವರು ಇದೇ ಸಂದರ್ಭ ಹೇಳಿದರು.