ರಾಜಕೀಯ ನಿವೃತ್ತಿಗೆ ಮುಂದಾದ ಕೇಂದ್ರ ಸಚಿವ!
ಕತಿಹಾರ್, ನ.17: "ನನ್ನ ರಾಜಕೀಯ ನಿವೃತ್ತಿಗೆ ಸಮಯ ಬಂದಿದೆ. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ಅನುಷ್ಠಾನವಾದ ತಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ" ಎಂದು ಹೇಳುವ ಮೂಲಕ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಚ್ಚರಿ ಮೂಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಜನಸಂಖ್ಯಾ ನಿಯಂತ್ರಣ, ನನ್ನ ರಾಜಕೀಯ ವೃತ್ತಿಯ ಮುಖ್ಯ ಎರಡು ಗುರಿಗಳಾಗಿದ್ದವು ಎಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ರಾಮಮಂದಿರ ನಿರ್ಮಿಸುವ ಜವಾಬ್ದಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ನನ್ನಂಥವರು ರಾಜಕೀಯದಿಂದ ನಿವೃತ್ತಿಯಾಗಲು ಇದು ಸಕಾಲ. ಜನಸಂಖ್ಯಾ ನಿಯಂತ್ರಣದ ಕಾನೂನು ಕಟ್ಟುನಿಟ್ಟಾಗಿ ಜಾರಿಯಾದ ತಕ್ಷಣ ನಿವೃತ್ತಿ ಪಡೆಯುತ್ತೇನೆ" ಎಂದು ಸ್ಪಷ್ಟಪಡಿಸಿದರು.
ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದ 67 ವರ್ಷ ವಯಸ್ಸಿನ ಸಿಂಗ್, ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದವರು. ಕಳೆದ ವಾರ ಕೂಡಾ ಜನಸಂಖ್ಯಾ ನಿಯಂತ್ರಣ ಜಾಗೃತಿ ಯಾತ್ರೆಯಲ್ಲಿ ಗಿರಿರಾಜ್ ಸಿಂಗ್ ಭಾಗವಹಿಸಿದ್ದರು.