ಸರಕಾರ ರಚಿಸಲು ರಾಜ್ಯಪಾಲರು ಕಾಂಗ್ರೆಸ್ಗೆ ಕರೆ ನೀಡಿಲ್ಲ: ಖರ್ಗೆ ಆರೋಪ
ಹೊಸದಿಲ್ಲಿ, ನ. 17: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರಕಾರ ರಚನೆಯ ಹಕ್ಕು ಪ್ರತಿಪಾದಿಸಲು ಕೂಡ ಕಾಂಗ್ರೆಸ್ಗೆ ಅವಕಾಶ ನೀಡಿಲ್ಲ. ಅಲ್ಲದೆ, ಶಿವಸೇನೆ, ಎನ್ಸಿಪಿಗೆ ಸಮಯಾವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿಗೆ ಲಾಭ ಮಾಡಿಕೊಡಲು ರಾಜ್ಯಪಾಲರು ಶಿವಸೇನೆ ಅಥವಾ ಎನ್ಸಿಪಿಗೆ ಸಾಕಷ್ಟು ಕಾಲಾವಕಾಶ ನೀಡಿಲ್ಲ. ಕಾಂಗ್ರೆಸ್ ಅನ್ನು ಸರಕಾರ ರಚನೆಯ ಹಕ್ಕು ಪ್ರತಿಪಾದಿಸಲು ಕೂಡ ಕರೆದಿಲ್ಲ. ಶಿವಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡಿಲ್ಲ. ಆದರೆ, ಸಾಂವಿಧಾನಿಕ ನಿಯಮಗಳನ್ನು ಅನುಸರಿಸುವಂತೆ ಸೋಗು ಹಾಕಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆ ನೀಡಬೇಕೆನ್ನುವ ಶಿವಸೇನೆಯ ಬೇಡಿಕೆ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಖರ್ಗೆ, ‘‘ಮುಖ್ಯಮಂತ್ರಿ ಹುದ್ದೆ ಕುರಿತ ಶಿವಸೇನೆ ನಿಲುವನ್ನು ನಾನು ಪ್ರಶ್ನಿಸಲು ಬಯಸುವುದಿಲ್ಲ. ಶಿವಸೇನೆಯ ಬೇಡಿಕೆ ಕುರಿತು ನಾನು ಹೇಳಿಕೆ ನೀಡುವ ಅಗತ್ಯ ಇಲ್ಲ’’ ಎಂದರು. ಕಾಂಗ್ರೆಸ್ ಎನ್ಸಿಪಿಯಂದಿಗೆ ಚರ್ಚಿಸಲಿದೆ ಹಾಗೂ ಒಂದೆರೆಡು ದಿನಗಳಲ್ಲಿ ನಿರ್ಧಾರಕ್ಕೆ ಬರಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.