ಮಹಾರಾಷ್ಟ್ರ: ಬಿಜೆಪಿಯ ರಾಜಕೀಯ ಪ್ರಮಾದದ ಕಾರಣ ಪಕ್ಷ ತೊರೆಯುತ್ತೇನೆ ಎಂದ ಪ್ರಮುಖ ನಾಯಕ
ಕೇಸರಿ ಪಕ್ಷಕ್ಕೆ ಮತ್ತೊಂದು 'ಮಹಾ' ಹೊಡೆತ
ಮುಂಬೈ: ಬಿಜೆಪಿಯ ರಾಜಕೀಯ ಪ್ರಮಾದದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ತೊರೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿರುವುದಾಗಿ ಪಕ್ಷದ ಹಿರಿಯ ಮುಖಂಡ ಏಕನಾಥ್ ಖಡ್ಸೆ ಪ್ರಕಟಿಸಿದ್ದಾರೆ. ಈಗಾಗಲೇ ಶಿವಸೇನೆ ಜತೆಗಿನ ಮೈತ್ರಿ ಮುರಿದುಬಿದ್ದು ಆಘಾತ ಅನುಭವಿಸಿರುವ ಬಿಜೆಪಿಗೆ ಮತ್ತೊಂದು ಹೊಡೆತ ಬೀಳುವುದು ಬಹುತೇಕ ಖಚಿತವಾಗಿದೆ.
ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಹಾಗೂ ಪಕ್ಷದ ಇತರ ಕೆಲ ಮುಖಂಡರು ಸಕ್ರಿಯವಾಗಿ ಪ್ರಚಾರ ನಡೆಸಿದ್ದರೆ, ಪಕ್ಷ ಕನಿಷ್ಠ 20-25 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲು ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
"ನನಗೆ ಶಿವಸೇನೆ ಕಡೆಯಿಂದ ಆಫರ್ ಬಂದಿದೆ" ಎಂದು ಹೇಳಿರುವ ಅವರು, ಅದನ್ನು ಸ್ವೀಕರಿಸಬೇಕೇ ಎಂಬ ಬಗ್ಗೆ ನಾನು ಗಂಭೀರವಾಗಿ ಯೋಚಿಸುತ್ತಿದ್ದೇನೆ. ತನ್ನ ತತ್ವಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಭಾವನೆಗಳಿಗೆ ಧಕ್ಕೆ ತಂದಿರುವ ಪಕ್ಷದಲ್ಲಿ ಏಕೆ ಉಳಿಯಬೇಕು ಎಂಬ ಭಾವನೆ ಮೂಡಿದೆ ಎಂದು ವಿವರಿಸಿದ್ದಾರೆ.
ಯಾವುದೇ ರಾಜ್ಯ ಅಥವಾ ಕೇಂದ್ರ ಮುಖಂಡರ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದ ಅವರು, ಪಕ್ಷದ ಕಾರ್ಯನಿರ್ವಹಣೆ ತೀವ್ರ ಮುಜುಗರ ತಂದಿದೆ ಎಂದು ಹೇಳಿದ್ದಾರೆ.