ಇವಿಎಂ ಆಕ್ರಮ ಆರೋಪ: ನಟ ಮನ್ಸೂರ್ ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ, ಡಿ.2: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳನ್ನು ತಿರುಚಲು ಸಾದ್ಯವಿದೆಯೆಂಬ ಆರೋಪಿಸಿ ತಮಿಳು ಚಿತ್ರ ನಟ ಮನ್ಸೂರ್ ಅಲಿಖಾನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ಈ ಅರ್ಜಿಯಲ್ಲಿ ಯಾವುದೇ ತಿರುಳು ಇಲ್ಲದಿರುವುದರಿಂದ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲವೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಅರವಿಂದ ಬೊಬಾಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಪ್ರಕರಣದ ಆಲಿಕೆ ನಡೆಸಲು ನಿರಾಕರಿಸಿತು.
ನಿಮ್ಮ ಆರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಾವು ಆಸಕ್ತರಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಬಿ.ಆರ್.ಗವಾಯ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಿಸಿತು.
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮನ್ಸೂರ್ ಅಲಿ ಖಾನ್ ಅವರು ದಿಂಡಿಗಲ್ ಲೋಕಸಭಾ ಕ್ಷೇತ್ರದಿಂ ಸ್ಪರ್ಧಿಸಿ ಪರಾಭವಗೊಂಡಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಖಾನ್ ಅವರು ತಜ್ಞರ ಸಹಾಯದಿಂದ ಇವಿಎಂಗಳನ್ನು ತಿರುಚುವ ಸಾಧ್ಯವಿದೆಯೆಂಬುದನ್ನು ತಜ್ಞರ ನೆರವಿನಿಂದ ಹಾಗೂ ಹಾಗೂ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಲು ತನಗೆ ಅನುಮತಿ ನೀಡಬೇಕೆಂದು ಮನ್ಸೂರ್ ಅಲಿ ಖಾನ್ ಕೋರಿದ್ದರು.