ನ್ಯಾಯವು ಪ್ರತೀಕಾರದ ರೂಪದಲ್ಲಿರಬಾರದು: ಸಿಜೆಐ ಬೊಬ್ಡೆ
ತೆಲಂಗಾಣ ಎನ್ ಕೌಂಟರ್ ಬಳಿಕ ಮುಖ್ಯ ನ್ಯಾಯಮೂರ್ತಿಯ ಹೇಳಿಕೆ
ಹೊಸದಿಲ್ಲಿ,ಡಿ.7: ಹೈದರಾಬಾದ್ ಮತ್ತು ಉನ್ನಾವೊಗಳಲ್ಲಿನ ಅತ್ಯಾಚಾರ ಘಟನೆಗಳ ಹಿನ್ನೆಲೆಯಲ್ಲಿ ನ್ಯಾಯದಾನ ವ್ಯವಸ್ಥೆಯ ಕುರಿತು ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ,ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ತನ್ನ ಸ್ಥಿತಿ ಮತ್ತು ನಿಲುವನ್ನು ಪುನರ್ಪರಿಶೀಲಿಸಿಕೊಳ್ಳಬೇಕಿದೆ ಎಂದು ಶನಿವಾರ ಇಲ್ಲಿ ಹೇಳಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎಸ್.ಎ.ಬೊಬ್ಡೆ ಅವರು,ಆದರೆ ನ್ಯಾಯವೆಂದಿಗೂ ಪ್ರತೀಕಾರದ ರೂಪ ತಳೆಯಕೂಡದು ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿಯ ಇತ್ತೀಚಿನ ಘಟನೆಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ತಾನು ತೆಗೆದುಕೊಳ್ಳುತ್ತಿರುವ ಸಮಯಾವಕಾಶ ಕುರಿತಂತೆ ತನ್ನ ಸ್ಥಿತಿ ಮತ್ತು ನಿಲುವನ್ನು ಪುನರ್ಪರಿಶೀಲಿಸಿಕೊಳ್ಳಬೇಕಿದೆ ಎಂಬ ಬಹುಚರ್ಚಿತ ಹಳೆಯ ವಿಷಯಗಳನ್ನೇ ಹೊಸ ಹುರುಪಿನೊಂದಿಗೆ ಮತ್ತೆ ಮುನ್ನೆಲೆಗೆ ತಂದಿವೆ, ನ್ಯಾಯವೆಂದೂ ದಿಢೀರ್ ಆಗಿ ಬರುವುದಿಲ್ಲ. ನ್ಯಾಯವೆಂದಿಗೂ ಪ್ರತೀಕಾರದ ರೂಪವನ್ನು ಪಡೆಯಬಾರದು. ಹಾಗಾದಲ್ಲಿ ಅದು ತನ್ನ ಚಾರಿತ್ರ್ಯವನ್ನು ಕಳೆದುಕೊಳ್ಳುತ್ತದೆ. ನ್ಯಾಯಾಂಗವು ಸ್ವಯಂ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಬೇಕು,ಆದರೆ ಅವು ಬಹಿರಂಗಗೊಳ್ಳಬೇಕೇ ಬೇಡವೇ ಎನ್ನುವುದು ಚರ್ಚೆಯ ವಿಷಯವಾಗಿದೆ ಎಂದರು.