'ಈರುಳ್ಳಿ' ವಿಚಾರದಲ್ಲಿ ಕೇಂದ್ರ ಸಚಿವ ಪಾಸ್ವಾನ್ ವಿರುದ್ಧ ಪ್ರಕರಣ ದಾಖಲು
ಮುಝಫರ್ ಪುರ: ಈರುಳ್ಳಿ ಬೆಲೆ ಏರಿಕೆ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಹಾಗೂ ಜನಸಾಮಾನ್ಯರನ್ನು ವಂಚಿಸುತ್ತಿದ್ದಾರೆ ಎಂದು ಆಪಾದಿಸಿ ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ವಿರುದ್ಧ ಮುಝಫರ್ ಪುರ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಅಪರಾಧ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರಾಜು ನಾಯರ್ ಎಂಬವರು ಜೆಎಂಎಫ್ಸಿ ನ್ಯಾಯಾಧೀಶ ಸೂರ್ಯಕಾಂತ್ ತಿವಾರಿ ಅವರಲ್ಲಿ ಈ ದೂರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಡಿಸೆಂಬರ್ 12ಕ್ಕೆ ಮುಂದೂಡಿದ್ದಾರೆ.
ಈರುಳ್ಳಿ ಬೆಲೆ ಏರಿಕೆ ತಡೆಯಲು ಕೇಂದ್ರ ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಹಾಗೂ ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್ವಿಲಾಸ್ ಪಾಸ್ವಾನ್ ವಿಫಲರಾಗಿದ್ದಾರೆ ಎಂದು ಮುಝಫರ್ ಪುರ ಪಟ್ಟಣದ ನಿವಾಸಿಯಾದ ನಾಯರ್ ದೂರಿದ್ದಾರೆ. ಕಾಳಸಂತೆ ಕಾರಣದಿಂದ ಈರುಳ್ಳಿ ಹಾಗೂ ತರಕಾರಿ ಬೆಲೆ ಏರುತ್ತಿದೆ ಎಂದು ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಹೇಳಿಕೆಯನ್ನು ಸಚಿವರು ನೀಡಿದ್ದಾರೆ ಎನ್ನುವುದು ಅವರ ಆರೋಪ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ ಹಾಗೂ ಅಪ್ರಮಾಣಿಕತೆ) 506 ಮತ್ತು 379ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.