ಆಂಧ್ರದಲ್ಲಿ ಬಿಜೆಪಿಯೊಂದಿಗೆ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ ಮೈತ್ರಿ
ಹೈದರಾಬಾದ್, ಜ.17: ಆಂಧ್ರಪ್ರದೇಶದಲ್ಲಿ 2024ರಲ್ಲಿ ಅಧಿಕಾರ ಹಿಡಿಯುವ ವಿಶ್ವಾಸದೊಂದಿಗೆ ಬಿಜೆಪಿಯೊಂದಿಗೆ ತನ್ನ ನೇತೃತ್ವದ ಜನ ಸೇನಾ ಪಕ್ಷ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಒಟ್ಟಿಗೆ ಹೋರಾಟ ನಡೆಸಲಿದೆ ಎಂದು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
‘‘ಬಿಜೆಪಿ ಹಾಗೂ ಜನಸೇನಾ ಮೈತ್ರಿ ಘೋಷಣೆ ಮಾಡಿರುವುದರಿಂದ ಇಂದು ಐತಿಹಾಸಿಕ ದಿನವಾಗಿದೆ. ರಾಜ್ಯದಲ್ಲಿರುವ ರಾಜಕೀಯ ಜಾತಿವಾದ, ರಾಜಕೀಯ ವಂಶಾಡಳಿತ ಹಾಗೂ ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು ನಾವು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ’’ ಎಂದು ಆಂಧ್ರಪ್ರದೇಶದಲ್ಲಿ ಬಿಜೆಪಿಯ ಉಸ್ತುವಾರಿಯಾಗಿರುವ ಸುನೀಲ್ ದೇವಧರ್ ಹೇಳಿದ್ದಾರೆ.
ಪವನ್ ಕಲ್ಯಾಣ್ 360 ಡಿಗ್ರಿ ಬಿಜೆಪಿಯತ್ತ ವಾಲಿಕೊಂಡು ಮೈತ್ರಿಗೆ ಮುಂದಾಗಿದ್ದಾರೆ. ಅವರು 2014ರಲ್ಲಿ ಬಿಜೆಪಿಯೊಂದಿಗೆ ಹೋರಾಡಿದ್ದರು. ಆದರೆ, ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. 2019ರಲ್ಲಿ ಎಡಪಕ್ಷಗಳು ಹಾಗೂ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. 2024ರ ಚುನಾವಣೆಯ ಬಳಿಕ ರಾಜ್ಯದಲ್ಲಿ ತಾನು ಸರಕಾರ ರಚಿಸುವುದಾಗಿ ಅವರು ಹೇಳಿದ್ದಾರೆ ಎಂದು ದೇವಧರ್ ತಿಳಿಸಿದರು.