ಗುತ್ತಿಗೆ ಕಾರ್ಮಿಕರೂ ಭವಿಷ್ಯ ನಿಧಿಗೆ ಅರ್ಹರು : ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಉದ್ಯೋಗದಾತರು ಕಾಯಂ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ಅನುಸರಿಸುವಂತಿಲ್ಲ; ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆ ಅನ್ವಯ ಸಾಂದರ್ಭಿಕ ಕಾರ್ಮಿಕರು ಕೂಡಾ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಇಪಿಎಫ್ ಕಾಯ್ದೆಯ ಸೆಕ್ಷನ್ 2 (ಎಫ್) ಅನ್ವಯ ಉದ್ಯೋಗಿ ಎನ್ನುವುದು ಎಲ್ಲರನ್ನೂ ಒಳಗೊಂಡ ವ್ಯಾಖ್ಯೆಯಾಗಿದ್ದು, ಒಂದು ಸಂಸ್ಥೆಯ ಕೆಲಸದ ಜತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡ ಹಾಗೂ ವೇತನ ಪಡೆಯುವ ಎಲ್ಲರೂ ಅರ್ಹರು" ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಮಲ್ಹೋತ್ರಾ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸರ್ಕಾರಿ ಸ್ವಾಮ್ಯದ ಪವನ್ ಹನ್ಸ್ ಲಿಮಿಟೆಡ್ಗೆ ನೀಡಿರುವ ಸೂಚನೆಯಡಿ ಸ್ಪಷ್ಟನೆಯಾಗಿ ಈ ಆದೇಶ ನೀಡಲಾಗಿದೆ. ಇದರ ಅನ್ವಯ ಎಲ್ಲ ಗುತ್ತಿಗೆ ಕಾರ್ಮಿಕರು ಭವಿಷ್ಯ ನಿಧಿ ಸೌಲಭ್ಯದಡಿ ಬರುತ್ತಾರೆ ಹಾಗೂ ಅವರಿಗೆ 2017ರ ಜನವರಿಂದ ಸೌಲಭ್ಯಗಳನ್ನು ನೀಡಬೇಕು ಎಂದು ಕಾರ್ಮಿಕ ಸಂಘ ಸುಪ್ರೀಂಕೋರ್ಟ್ಗೆ ಮನವಿ ಮಾಡಿತ್ತು.
ಪವನ್ ಹನ್ಸ್ 2017ರ ಜನವರಿಯಿಂದ 2019ರ ಡಿಸೆಂಬರ್ವರೆಗೆ ಪಾವತಿಸಬೇಕಾದ ಮೊತ್ತಕ್ಕೆ ಶೇಕಡ 12ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುವಂತೆಯೂ ಸೂಚಿಸಿದೆ.