ಮಧ್ಯಪ್ರದೇಶ: ಪೌರತ್ವ ಕಾಯ್ದೆ ಪರ ರ್ಯಾಲಿಯಲ್ಲಿ ಹಿಂಸಾಚಾರ
ಭೋಪಾಲ, ಜ.20: ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ರವಿವಾರ ಆಯೋಜಿಸಲಾಗಿದ್ದ ಪೌರತ್ವ ಕಾಯ್ದೆ ಪರ ರ್ಯಾಲಿಯಲ್ಲಿ ಹಿಂಸಾಚಾರ ನಡೆದ ವರದಿಯಾಗಿದೆ. ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಪೌರತ್ವ ಕಾಯ್ದೆ ಬೆಂಬಲಿಗರು ಘರ್ಷಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದಾಗ ಕನಿಷ್ಟ ಮೂವರು ಗಾಯಗೊಂಡಿದ್ದಾರೆ. ಪೌರತ್ವ ಕಾಯ್ದೆ ಬೆಂಬಲಿಗರು ಜಾಥಾ ನಡೆಸಲು ಅನುಮತಿ ಕೋರಿದ್ದು ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೂ ಸುಮಾರು 100 ಮಂದಿ, ಸೆಕ್ಷನ್ 144ನ್ನು ಉಲ್ಲಂಘಿಸಿ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಅವರನ್ನು ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ತಡೆದಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರ ತಲೆ ಕೂದಲು ಹಿಡಿದೆಳೆದು ಅವರನ್ನು ಕಾಲಿಂದ ಒದೆಯಲಾಗಿದೆ. ಮತ್ತೊಬ್ಬ ಮಹಿಳಾ ಅಧಿಕಾರಿಯ ಬಟ್ಟೆಯನ್ನು ಹರಿಯಲು ಪ್ರಯತ್ನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿಧಿ ನಿವೇದಿತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಿಳಾ ಅಧಿಕಾರಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಜಿಲ್ಲಾಧಿಕಾರಿ ನಿಧಿ ನಿವೇದಿತಾ ಕಪಾಳಮೋಕ್ಷ ಮಾಡಿರುವ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ. ಮತ್ತೊಂದು ವೀಡಿಯೊ ದೃಶ್ಯದಲ್ಲಿ ಉಪ ಜಿಲ್ಲಾಧಿಕಾರಿ ಪ್ರಿಯಾ ವರ್ಮ ತ್ರಿವರ್ಣ ಧ್ವಜ ಹಿಡಿದುಕೊಂಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪ್ರಯತ್ನಿಸುವ ದೃಶ್ಯವಿದೆ. ಅಲ್ಲದೆ ವ್ಯಕ್ತಿಯೊಬ್ಬನ ಕಾಲರ್ ಹಿಡಿದು ಎಳೆದೊಯ್ದು ಆತನ ಕೆನ್ನೆಗೆ ಬಾರಿಸುವ ಮತ್ತು ಇತರ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡುವ ಸಂದರ್ಭ ಅವರನ್ನು ಸುತ್ತುವರಿದ ಪ್ರತಿಭಟನಾಕಾರರು ಆಕ್ರೋಶದಿಂದ ಪ್ರಿಯಾ ವರ್ಮರ ತಲೆಕೂದಲು ಹಿಡಿದು ಎಳೆದಾಡುವ ದೃಶ್ಯವೂ ವೈರಲ್ ಆಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಘಟನೆಯನ್ನು ಖಂಡಿಸಿದ್ದು ಇದು ಪ್ರಜಾಪ್ರಭುತ್ವದ ಕಪ್ಪು ದಿನವಾಗಿದೆ ಎಂದು ಟೀಕಿಸಿದೆ. ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಹಿಡಿದು ಎಳೆಯಲು, ಅವರ ಮೇಲೆ ಹಲ್ಲೆ ನಡೆಸಲು ಜಿಲ್ಲಾಧಿಕಾರಿಗೆ ಯಾರು ಅಧಿಕಾರ ನೀಡಿದ್ದಾರೆ. ಇಂತಹ ನಿರಂಕುಶ ಆಡಳಿತಕ್ಕೆ ಮಧ್ಯಪ್ರದೇಶದ ಜನತೆಯೇ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಶಿವರಾಜ್ ಚೌಹಾಣ್ ಹೇಳಿದ್ದು ಜಿಲ್ಲಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.