ಈ ರಾಜ್ಯಕ್ಕಿನ್ನು ಮೂರು ರಾಜಧಾನಿ!
ಅಮರಾವತಿ, ಜ.21: ಆಂಧ್ರ ಪ್ರದೇಶದ ಆಡಳಿತ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ ಮತ್ತು ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲ್ ನಗರವನ್ನು ಪರಿವರ್ತಿಸುವ ಮಸೂದೆಗೆ ಆಂಧ್ರ ಪ್ರದೇಶ ವಿಧಾನಸಭೆ ಸೋಮವಾರ ತಡರಾತ್ರಿ ಅನುಮೋದನೆ ನೀಡಿದೆ.
ಈ ಸಂಬಂಧ "ಎಪಿ ಡಿಸೆಂಟ್ರಲೈಸೇಷನ್ ಆ್ಯಂಡ್ ಇನ್ಕ್ಲೂಸಿವ್ ಡೆವಲಪ್ಮೆಂಟ್ ಆಫ್ ಆಲ್ ರೀಜನ್ಸ್" ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ನೂರಾರು ರೈತರು ಹಾಗೂ ಮಹಿಳೆಯರು ಅಮರಾವತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಭದ್ರತಾ ಗೋಡೆಯನ್ನು ಭೇದಿಸಿ ಶಾಸಕಾಂಗ ಸಂಕೀರ್ಣದತ್ತ ನುಗ್ಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಬೇಕಾಯಿತು.
ಶಾಸಕಾಂಗ ಸಂಕೀರ್ಣದ ಹಿಂಭಾಗದಲ್ಲಿ ಹೈಡ್ರಾಮಾ ನಡೆಯುತ್ತಿರುವ ನಡುವೆಯೇ, ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಟಿಡಿಪಿ ಶಾಸಕರ ಜತೆಗೆ ಪಾದಯಾತ್ರೆಯಲ್ಲಿ ವಿಧಾನಸಭೆಗೆ ಆಗಮಿಸಿದರು. ಆದರೆ ಬಿಗಿ ಭದ್ರತೆಯ ಕಾರಣದಿಂದ ವಿಧಾನಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಲು ಸಾಧ್ಯವಾಗಲಿಲ್ಲ.
ಈ ಮಧ್ಯೆ ವಿಧಾನಸಭೆಯಲ್ಲಿ ಮಸೂದೆ ಕುರಿತ ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ತೆಲುಗುದೇಶಂ ಪಕ್ಷಕ್ಕೆ ಸೇರಿದ 17 ಶಾಸಕರನ್ನು ಕಲಾಪದಿಂದ ಅಮಾನತು ಮಾಡಲಾಗಿದೆ. ಇದಕ್ಕೂ ಮುನ್ನ ಮಸೂದೆ ಮಂಡನೆಗೆ ತೆಲುಗುದೇಶಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ ಆಸನದತ್ತ ಧಾವಿಸಿ ಧರಣಿ ಆರಂಭಿಸಿದರು. ಸದನದ ನಾಯಕರು ಭಾಷಣ ಮಾಡಲು ಅಡ್ಡಿಪಡಿಸಿ, ಜೈ ಅಮರಾವತಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾರ್ಷಲ್ಗಳನ್ನು ಕರೆಸಿ ಸದಸ್ಯರನ್ನು ಹೊರಗೆ ಕಳುಹಿಸಲಾಯಿತು.
ಬಳಿಕ ತೆಲುಗುದೇಶಂ ಸದಸ್ಯರು ವಿಧಾನಸೌಧದ ಮುಖ್ಯದ್ವಾರದ ಬಳಿ ಧರಣಿ ಕುಳಿತರು. ಈ ಸಂದರ್ಭ ಪೊಲೀಸರು ಮತ್ತು ಮುಖಂಡರ ನಡುವೆ ಘರ್ಷಣೆ ನಡೆಯಿತು. ಪ್ರತಿಭಟನಾಕಾರರು ನಡೆಸಿದ ಕಲ್ಲುತೂರಾಟದಿಂದ ಆರು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.