ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ: ರಜಿನಿಕಾಂತ್
ಚೆನ್ನೈ: ದ್ರಾವಿಡ ಆಂದೋಲನದ ಪಿತಾಮಹ ಎಂದೇ ಪರಿಗಣಿತರಾದ ಪೆರಿಯಾರ್ ಇ.ವಿ . ರಾಮಸಾಮಿ ಕುರಿತಂತೆ ತಾನು ನೀಡಿರುವ ಹೇಳಿಕೆಗಳಿಗೆ ಕ್ಷಮೆಯಾಚಿಸಲು ಹಿರಿಯ ನಟ ರಜಿನಿಕಾಂತ್ ನಿರಾಕರಿಸಿದ್ದಾರೆ.
"ನಾನೇನೂ ಇಲ್ಲದ್ದನ್ನು ಹೇಳಿಲ್ಲ, ಮಾಧ್ಯಮದಲ್ಲಿ ಆ ಕುರಿತು ವರದಿಯಾದ ವಿವರಗಳಿವೆ. ಅವುಗಳನ್ನು ತೋರಿಸಬಲ್ಲೆ, ನಾನು ಕ್ಷಮೆಯಾಚಿಸುವುದಿಲ್ಲ'' ಎಂದು ರಜಿನಿಕಾಂತ್ ಹೇಳಿದ್ದಾರೆ.
"ರಾಮ ಹಾಗೂ ಸೀತೆಯರ ಬಟ್ಟೆಗಳಿಲ್ಲದ ಹಾಗೂ ಚಪ್ಪಲಿಯ ಹಾರ ಹಾಕಲ್ಪಟ್ಟ ಚಿತ್ರಗಳನ್ನು ಪೆರಿಯಾರ್ ಇ ವಿ ರಾಮಸಾಮಿ 1971ರಲ್ಲಿ ನೇತೃತ್ವದಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಕೊಂಡು ಹೋಗಲಾಗಿತ್ತು'' ಎಂದು ಬರೆಯಲಾದ ಸುದ್ದಿಪತ್ರಿಕೆಗಳು ಹಾಗೂ ಮ್ಯಾಗಝಿನ್ ಗಳ ಕ್ಲಿಪ್ಪಿಂಗ್ ಗಳನ್ನು ಅವರು ಪ್ರದರ್ಶಿಸಿದರು.
``ನಡೆದಿರದೇ ಇದ್ದುದನ್ನು ನಾನು ಹೇಳಿದ್ದೇನೆ ಎಂದು ವಿವಾದ ಹುಟ್ಟಿಕೊಂಡಿದೆ. ನಾನೇನೂ ಯಾವುದನ್ನೂ ಕಲ್ಪಿಸಿ ಹೇಳಿಲ್ಲ, ಧರಣಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ್ (ಆಗಿನ ಜನಸಂಘದ ಹಾಗೂ ಈಗಿನ ಬಿಜೆಪಿ ನಾಯಕ ) ಇದನ್ನು ದೃಢೀಕರಿಸಿದ್ದಾರೆ'' ಎಂದು ರಜಿನಿಕಾಂತ್ ಹೇಳಿದ್ದಾರೆ.
ಪೆರಿಯಾರ್ ಹಿಂದೂ ದೇವ ದೇವತೆಗಳ ಕಟು ಟೀಕಾಕಾರರಾಗಿದ್ದರೂ ಆಗ ಅವರನ್ನು ಯಾರೂ ಟೀಕಿಸಿರಲಿಲ್ಲ ಎಂದು ರಜಿನಿಕಾಂತ್ ಜನವರಿ 14ರಂದು ತಮಿಳು ಮ್ಯಾಗಝಿನ್ `ತುಘ್ಲಕ್' ತನ್ನ 50ನೇ ವಾರ್ಷಿಕೋತ್ಸವ ಸಂದರ್ಭ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು.