ಆದಿತ್ಯನಾಥ್ ಭೇಟಿ ಹಿನ್ನೆಲೆ: ಬೀಡಾಡಿ ಜಾನುವಾರುಗಳನ್ನು ಹಿಡಿಯಲು ಇಂಜಿನಿಯರ್ ಗಳಿಗೆ ಆದೇಶ !
ಮಿರ್ಝಾಪುರ, ಜ. 28: ಪೂರ್ವ ಉತ್ತರಪ್ರದೇಶದ ಮಿರ್ಝಾಪುರ ಜಿಲ್ಲೆಯ ಮುಖ್ಯಮಂತ್ರಿ ಆದಿತ್ಯನಾಥ್ ಭೇಟಿ ನೀಡುವ ದಿನ ರಾಜ್ಯದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ಗಳು ಬೀಡಾಡಿ ಜಾನುವಾರುಗಳನ್ನು ಹಿಡಿದು ಸಾಗಿಸಬೇಕು ಎಂದು ನೀಡಿದ್ದ ವಿವಾದಾತ್ಮಕ ಆದೇಶವನ್ನು ಉತ್ತರಪ್ರದೇಶ ಸರಕಾರ ಮಂಗಳವಾರ ಹಿಂದೆಗೆದುಕೊಂಡಿದೆ.
‘‘ನಿಮ್ಮ ಅಧೀನದಲ್ಲಿರುವ ನೌಕರರ ತಂಡದೊಂದಿಗೆ 8ರಿಂದ 10 ಹಗ್ಗಗಳ ಜೊತೆಗೆ ನಿಂತುಕೊಳ್ಳಿ. ರಸ್ತೆಯಲ್ಲಿ ಯಾವುದಾದರೂ ಜಾನುವಾರನ್ನು ನೋಡಿದ ಕೂಡಲೇ ಅದರ ಕುತ್ತಿಗೆಗೆ ಹಗ್ಗ ಕಟ್ಟಿ ದೂರ ಕೊಂಡೊಯ್ಯಿರಿ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯ ನಾಥ್ ತೆರಳುವಾಗ ಯಾವುದೇ ಅಡೆತಡೆ ಉಂಟಾಗಬಾರದು’’ ಎಂದು ಕಾರ್ಯಕಾರಿ ಎಂಜಿನಿಯರ್ ಸಹಿ ಹಾಕಿದ ಒಂದು ಪುಟದ ಸರಕಾರದ ಆದೇಶದಲ್ಲಿ ಹೇಳಲಾಗಿದೆ.
ಈ ಆದೇಶವನ್ನು ಸೋಮವಾರ ಜಾರಿ ಮಾಡಲಾಗಿದೆ. ಆದೇಶದಲ್ಲಿ ಜಾನುವಾರುಗಳನ್ನು ಸೆರೆ ಹಿಡಿಯುವ ಕರ್ತವ್ಯಕ್ಕೆ ಲೋಕೋಪಯೋಗಿ ಇಲಾಖೆಯ 8 ಮಂದಿ ಕಿರಿಯ ಎಂಜಿನಿಯರ್ಗಳನ್ನು ನಿಯೋಜಿಸಲಾಗಿದೆ. ಪಿಡಬ್ಲುಡಿ ಎಂಜಿನಿಯರ್ಗಳು ಸಾಮಾನ್ಯವಾಗಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆಗಳ ವಿನ್ಯಾಸ, ನಿರ್ಮಾಣ, ನಿರ್ವಹಣೆ ನೋಡಿಕೊಳ್ಳುತ್ತಾರೆ. ಜಿಲ್ಲೆಯಾದ್ಯಂತ ನಡೆಯುವ ಉತ್ತರಪ್ರದೇಶ ಸರಕಾರದ ‘ಗಂಗಾ ಯಾತ್ರೆ’ ಒಂದು ಭಾಗವಾಗಿ ಪೂರ್ವ ಉತ್ತರಪ್ರದೇಶ ಜಿಲ್ಲೆಗೆ ಆದಿತ್ಯನಾಥ್ ಬುಧವಾರ ಭೇಟಿ ನೀಡಲಿದ್ದಾರೆ. ಮಿರ್ಝಾಪುರದ ಮೂಲಕ ಹಾದು ಹೋಗುವ ಗಂಗಾ ನದಿಯನ್ನು ಶುದ್ದೀಕರಣ ಗೊಳಿಸುವ ಉದ್ದೇಶವನ್ನು ಈ ಯಾತ್ರೆ ಹೊಂದಿದೆ.