ನಿತೀಶ್ ಕುಮಾರ್ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು: ಪ್ರಶಾಂತ್ ಕಿಶೋರ್
ಹೊಸದಿಲ್ಲಿ, ಫೆ.18: ಬಿಜೆಪಿ- ಜೆಡಿಯು ಮೈತ್ರಿಯ ವಿಷಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ತನ್ನ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು. ಆದರೆ ಈಗಲೂ ಅವರ ಬಗ್ಗೆ ತನಗೆ ಗೌರವವಿದೆ ಎಂದು ಜೆಡಿಯುವಿನಿಂದ ಉಚ್ಛಾಟನೆಯಾಗಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಗಾಂಧಿ ಅನುಯಾಯಿಗಳು ಗೋಡ್ಸೆ ಬೆಂಬಲಿಗರೊಂದಿಗೆ ಇರಲು ಸಾಧ್ಯವಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುಜರಾತ್ನ ಮುಖಂಡರ ಆದೇಶವನ್ನು ಪಾಲಿಸುವವರು. ರಾಜ್ಯಕ್ಕೆ ಬಲಿಷ್ಟ ನಾಯಕರ ಅಗತ್ಯವಿದೆ, ಹಿಂಬಾಲಕರಲ್ಲ ಎಂದು ಕಿಶೋರ್ ವಾಗ್ದಾಳಿ ನಡೆಸಿದ್ದಾರೆ.
ಕಳೆದ 15 ವರ್ಷದಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ ನಡೆದೇ ಇಲ್ಲ ಎಂದು ತಾನು ಹೇಳುತ್ತಿಲ್ಲ. ಆದರೆ ಇತರ ರಾಜ್ಯಗಳೊಂದಿಗೆ ಬಿಹಾರವನ್ನು ಹೋಲಿಸಿದರೆ, ಆಗ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯದ ನಿಧಾನಗತಿಯ ಬಗ್ಗೆ ತಿಳಿಯಬಹುದು. 2005ರಲ್ಲಿ ದೇಶದ ಅತ್ಯಂತ ಬಡ ರಾಜ್ಯ ಎನಿಸಿಕೊಂಡಿದ್ದ ಬಿಹಾರದ ಸ್ಥಿತಿಯಲ್ಲಿ ಈಗಲೂ ಯಾವುದೇ ಸುಧಾರಣೆಯಾಗಿಲ್ಲ. ನಿತೀಶ್ ಕುಮಾರರ ಆಡಳಿತದ ಮಾದರಿ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಅಭಿವೃದ್ಧಿ ಸೂಚ್ಯಾಂಕದಲ್ಲಿ ಬಿಹಾರ ಇನ್ನೂ ಅಂತಿಮ ಸ್ಥಾನದಲ್ಲಿಯೇ ಇರುವ ಬಗ್ಗೆ ರಾಜ್ಯದ ಜನತೆ ಕಳವಳ ಹೊಂದಿದ್ದಾರೆ. ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಿಸಲಾಗುತ್ತಿದೆ. ಆದರೆ ಶಿಕ್ಷಣದ ಗುಣಮಟ್ಟ ಸುಧಾರಿಸಲು ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಟೀಕಿಸಿದ ಪ್ರಶಾಂತ್ ಕಿಶೋರ್, ಬಿಹಾರದ ಅಭಿವೃದ್ಧಿ ವಿಷಯದಲ್ಲಿ ತನ್ನೊಡನೆ ಬಹಿರಂಗ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಅಥವಾ ಸಚಿವರಿಗೆ ಸವಾಲು ಹಾಕುವುದಾಗಿ ತಿಳಿಸಿದರು.
ದೇಶದ 10 ಉತ್ತಮ ರಾಜ್ಯಗಳ ಪಟ್ಟಿಯಲ್ಲಿ ಬಿಹಾರವೂ ಸ್ಥಾನ ಪಡೆಯುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಫೆ.20ರಿಂದ ‘ಬಾತ್ ಬಿಹಾರ್ ಕಿ’ ಎಂಬ ಅಭಿಯಾನವನ್ನು ಆರಂಭಿಸುವುದಾಗಿ ಕಿಶೋರ್ ಹೇಳಿದರು. ಪ್ರಶಾಂತ್ ಕಿಶೋರ್ ಟೀಕೆಗೆ ಪ್ರತಿಕ್ರಿಯಿಸಿರುವ ಜೆಡಿಯು ಮುಖಂಡ ಅಜಯ್ ಅಲೋಕ್, ಮಾನಸಿಕ ಸ್ಥಿಮಿತ ಕಳೆದುಕೊಂಡವರು ಈ ರೀತಿ ಮಾತನಾಡುತ್ತಾರೆ ಎಂದಿದ್ದಾರೆ.