ಕುಟುಂಬದ 6 ಸದಸ್ಯರ ಹತ್ಯೆ ಆರೋಪಿ ಜಾಲಿ ಜೋಸೆಫ್ ಆತ್ಮಹತ್ಯೆಗೆ ಯತ್ನ
ತಿರುವನಂತಪುರ, ಫೆ.27: ಕುಟುಂಬದ 6 ಸದಸ್ಯರನ್ನು ಹತ್ಯೆ ಪ್ರಕರಣದ ಆರೋಪಿ ಜಾಲಿ ಜೋಸೆಫ್ ಕೋಝಿಕೋಡ್ನ ಜೈಲಿನಲ್ಲಿ ಮುಂಗೈಯ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.
2002ರಿಂದ 2016ರವರೆಗಿನ ಅವಧಿಯಲ್ಲಿ ತನ್ನ ಮಾಜಿ ಪತಿ, ಅತ್ತೆ , ಮಾವನ ಸಹಿತ ಕುಟುಂಬದ 6 ಮಂದಿಯನ್ನು ಅನ್ನದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿದ ಆರೋಪದಲ್ಲಿ ಜಾಲಿ ಜೋಸೆಫ್ ಮತ್ತು ಆಕೆಯ ಇಬ್ಬರು ಸಹಾಯಕರನ್ನು ಕಳೆದ ಅಕ್ಟೋಬರ್ನಲ್ಲಿ ಕೇರಳ ಪೊಲೀಸರು ಬಂಧಿಸಿದ್ದರು.
ಜೈಲುವಾಸಿಯಾದ ದಿನದಿಂದಲೂ ಜಾಲಿ ಜೋಸೆಫ್ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೌನ್ಸೆಲಿಂಗ್ಗೆ ಒಳಪಡಿಸಲಾಗಿತ್ತು. ಅಲ್ಲದೆ ಆಕೆಯನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸದೆ, ಆಕೆಯ ಮೇಲೆ ಕಣ್ಣಿಡುವಂತೆ ಇತರ ಖೈದಿಗಳಿಗೆ ಸೂಚಿಸಿದ್ದೆವು. ಆದರೆ ಗುರುವಾರ ಬೆಳಿಗ್ಗೆ ಮುಂಗೈಯ ನರಗಳನ್ನು ಚೂಪಾದ ವಸ್ತುವಿನಿಂದ ಕತ್ತರಿಸಿಕೊಂಡು ನರಳುತ್ತಾ ಬಿದ್ದಿದ್ದ ಜಾಲಿ ಜೋಸೆಫ್ಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.