ದಿಲ್ಲಿ ಹಿಂಸಾಚಾರ: ಮೃತರ ಮರಣೋತ್ತರ ಪರೀಕ್ಷೆಗಳ ವೀಡಿಯೊ ಚಿತ್ರೀಕರಣಕ್ಕೆ ನಿರ್ದೇಶ
ಹೊಸದಿಲ್ಲಿ,ಮಾ.6: ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ ಮರಣೋತ್ತರ ಪರೀಕ್ಷೆಗಳ ವೀಡಿಯೊ ಚಿತ್ರೀಕರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ ಆಸ್ಪತ್ರೆಗಳಿಗೆ ನಿರ್ದೇಶ ನೀಡಿದೆ.
ಎಲ್ಲ ಶವಗಳ ಡಿಎನ್ಎ ಸ್ಯಾಂಪಲ್ಗಳನ್ನು ಕಾದಿರಿಸುವಂತೆ ಮತ್ತು ಮುಂದಿನ ವಿಚಾರಣಾ ದಿನವಾದ ಬುಧವಾರದವರೆಗೆ ಯಾವುದೇ ಅಪರಿಚಿತ ಶವವನ್ನು ವಿಲೇವಾರಿ ಮಾಡದಂತೆ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್ ಮತ್ತು ಐ.ಎಸ್.ಮೆಹ್ತಾ ಅವರ ಪೀಠವು ಅಧಿಕಾರಿಗಳಿಗೆ ಆದೇಶಿಸಿದೆ.
ಹಿಂಸಾಚಾರದ ಸಂದರ್ಭ ನಾಪತ್ತೆಯಾಗಿರುವ ತನ್ನ ಬಾವನ ಪತ್ತೆಗೆ ಕೋರಿ ವ್ಯಕ್ತಿಯೋರ್ವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದ ಈ ನಿರ್ದೇಶ ಹೊರಬಿದ್ದಿದೆ.
ನಾಪತ್ತೆಯಾಗಿದ್ದ ಹಂಝ ಎಂಬಾತನ ಶವವು ಸೋಮವಾರ ಗೋಕುಲಪುರಿಯ ಮೋರಿಯಲ್ಲಿ ಪತ್ತೆಯಾಗಿತ್ತು ಮತ್ತು ಆರ್ಎಂಎಲ್ ಆಸ್ಪತ್ರೆಯಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ವಿಚಾರಣೆ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.