ದಿಲ್ಲಿ ಹಿಂಸಾಚಾರ: 11ರಂದು ಸಂಸತ್ತಿನಲ್ಲಿ ಚರ್ಚೆ
ಹೊಸದಿಲ್ಲಿ, ಮಾ.6: ಕಳೆದ ವಾರ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಮಾರ್ಚ್ 11ರಂದು ಚರ್ಚೆ ನಡೆಯಲಿದೆ. ಗೃಹ ಸಚಿವ ಅಮಿತ್ ಶಾ ಉತ್ತರಿಸಲಿದ್ದಾರೆ ಎಂದು ಸರಕಾರ ತಿಳಿಸಿದೆ.
ದಿಲ್ಲಿ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಲೇ ಬಂದಿದ್ದರೂ, ಹೋಳಿ ಹಬ್ಬ ಮುಗಿದ ಬಳಿಕವಷ್ಟೇ ಚರ್ಚೆ ನಡೆಯುತ್ತದೆ ಎಂದು ಸರಕಾರ ಸ್ಪಷ್ಟಪಡಿಸಿತ್ತು. ಇದೀಗ ಹೋಳಿ ಹಬ್ಬದ ಮರುದಿನ, ಮಾರ್ಚ್ 11ರಂದು ಸಂಸತ್ತಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿರುವುದಾಗಿ ವರದಿಯಾಗಿದೆ.
ಹಿಂಸಾಚಾರದ ಬಗ್ಗೆ ಚರ್ಚೆ ನಡೆಯಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ಆದ್ದರಿಂದ ಅವರು ಚರ್ಚೆಗೆ ಅಡ್ಡಿ ಪಡಿಸುವುದಿಲ್ಲ ಎಂದು ನಿರೀಕ್ಷಿಸುತ್ತಿದ್ದೇವೆ. ಈಗ ದಿಲ್ಲಿಯಲ್ಲಿ ಸಹಜ ಸ್ಥಿತಿ ಮರಳಿರುವುದರಿಂದ ಚರ್ಚೆ ನಡೆಸಲು ಇದು ಸಕಾಲವಾಗಿದೆ ಎಂದು ಜೋಷಿ ಹೇಳಿದ್ದಾರೆ. ದಿಲ್ಲಿ ಹಿಂಸಾಚಾರದ ಬಗ್ಗೆ ಹೋಳಿ ಹಬ್ಬದ ಬಳಿಕವೇ ಸಂಸತ್ತಿನಲ್ಲಿ ಚರ್ಚಿಸಲಾಗುವುದು ಎಂದು ಗುರುವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು.