ದಿಲ್ಲಿ ಹಿಂಸಾಚಾರ: ಗುರುತಿಸಲಾಗದ ಮೃತದೇಹಗಳ ವಿಲೇವಾರಿಗೆ ಆಸ್ಪತ್ರೆಗಳಿಗೆ ಹೈಕೋರ್ಟ್ ಅನುಮತಿ
ಹೊಸದಿಲ್ಲಿ, ಮಾ. 11: ಕಳೆದ ತಿಂಗಳು ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಗುರುತಿಸಲಾಗದ ಮೃತದೇಹಗಳನ್ನು ವಿಲೇವಾರಿ ಮಾಡಲು ದಿಲ್ಲಿ ಉಚ್ಚ ನ್ಯಾಯಾಲಯ ದಿಲ್ಲಿಯ ಆಸ್ಪತ್ರೆಗಳಿಗೆ ಅನುಮತಿ ನೀಡಿದೆ.
ಮುಂದಿನ ಆದೇಶ ನೀಡುವ ವರೆಗೆ ಗುರುತಿಸಲಾಗದ ಮೃತದೇಹಗಳನ್ನು ವಿಲೇವಾರಿ ಮಾಡದಿರುವಂತೆ ನ್ಯಾಯಾಲಯ ಈ ಹಿಂದೆ ಸರಕಾರಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿತ್ತು. ಅಲ್ಲದೆ, ಮರಣೋತ್ತರ ಪರೀಕ್ಷೆಯ ವೀಡಿಯೊವನ್ನು ನೀಡುವಂತೆ ತಿಳಿಸಿತ್ತು.
ಮೃತದೇಹದ ಡಿಎನ್ಎ ಮಾದರಿಗಳನ್ನು ಸಂರಕ್ಷಿಸಿ ಇರಿಸುವಂತೆ ಕೂಡ ನ್ಯಾಯಾಲಯ ಆದೇಶಿಸಿತ್ತು. ಈಶಾನ್ಯ ದಿಲ್ಲಿಯ ಮುರ್ಶಿದಾಬಾದ್ನಲ್ಲಿ ನಾಪತ್ತೆಯಾದ ವ್ಯಕ್ತಿಯೊಬ್ಬರ ಬಗ್ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ. ನಾಪತ್ತೆಯಾದ ವ್ಯಕ್ತಿಯ ಮೃತದೇಹ ಅನಂತರ ಭಾಗೀರಥಿ ವಿಹಾರದ ಚರಂಡಿಯಲ್ಲಿ ಪತ್ತೆಯಾಗಿತ್ತು. ತಮ್ಮ ಸಂಬಂಧಿಕರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ ವ್ಯಕ್ತಿಗಳನ್ನು ಕರೆದು ಮೃತದೇಹಗಳನ್ನು ಗುರುತಿಸುವಂತೆ ಸೂಚಿಸಬೇಕು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರಜನೀಶ್ ಅವರನ್ನು ಒಳಗೊಂಡ ಪೀಠ ಭಟ್ನಗರ್ ಸರಕಾರಿ ಆಸ್ಪತ್ರೆಗಳಿಗೆ ಸೂಚಿಸಿದೆ. ಗುರುತಿಸಲಾಗದ ಮೃತದೇಹಗಳನ್ನು ಅನಿರ್ದಿಷ್ಟಾವಧಿ ವರೆಗೆ ಶವಾಗಾರದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಗುರುತಿಸಲಾಗದ ಎಲ್ಲ ಮೃತದೇಹಗಳನ್ನು ವಿವರಗಳನ್ನು ಭಾವಚಿತ್ರದೊಂದಿಗೆ ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ನ್ಯಾಯಾಲಯ ಸೂಚಿಸಿತು