ನಿಲ್ಲದ ಕೊರೋನ ಅಟ್ಟಹಾಸ: ಒಂದೇ ದಿನ 389 ಮಂದಿಗೆ ಸೋಂಕು ದೃಢ; ಸಾವಿನ ಸಂಖ್ಯೆ 52ಕ್ಕೇರಿಕೆ
ಹೊಸದಿಲ್ಲಿ, ಎ.1: ಭಾರತಾದ್ಯಂತ ಕೊರೋನಾ ವೈರಸ್ ಸೋಂಕು ಶರವೇಗದಿಂದ ಹರಡುತ್ತಿದ್ದು, ಕಳೆದ 24 ತಾಸುಗಳಲ್ಲಿ 386 ಮಂದಿಗೆ ಸೋಂಕು ತಗಲಿದೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಸೋಂಕಿಗೊಳಗಾದವರ ಸಂಖ್ಯೆ 1751ಕ್ಕೇರಿದೆ. ಮಂಗಳವಾರ ಒಟ್ಟು 5 ಮಂದಿ ಕೊರೋನಾ ಪೀಡಿತರು ಸಾವನ್ನಪ್ಪಿದ್ದು, ದೇಶದಲ್ಲಿ ಈ ಮಾರಕ ರೋಗಕ್ಕೆ ಬಲಿಯಾದವರ ಸಂಖ್ಯೆ 52ಕ್ಕೇರಿದೆ.
ಹೊಸದಿಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ವರದಿಯಾಗಿರುವ ಅನೇಕ ಕೋವಿಡ್-19 ಪ್ರಕರಣಗಳು ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ನಲ್ಲಿ ನಡೆದ ಧಾರ್ಮಿಕ ಸಮಾವೇಶದ ಜೊತೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ದೇಶಾದ್ಯಂತ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಪೈಕಿ 132 ಮಂದಿ ಗುಣಮುಖರಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಾಶ್ಮೀರ ಓರ್ವ ಹಾಗೂ ತೆಲಂಗಾಣದ ಆರು ಮಂದಿ ಸೇರಿದಂತೆ ಒಟ್ಟು ಏಳು ಜನರು, ಈ ಸಮಾವೇಶದಲ್ಲಿ ಪಾಲ್ಗೊಂಡ ಕೆಲವು ದಿನಗಳ ಬಳಿಕ ಕೊರೋನ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಅದು ಹೇಳಿದೆ.
ಇತ್ತ ದಿಲ್ಲಿ ಸರಕಾರವು ನಿಝಾಮುದ್ದೀನ್ ಮರ್ಕಝ್ನಲ್ಲಿದ್ದ 2361 ಮಂದಿಯನ್ನು ತೆರವುಗೊಳಿಸಿದೆ. ಈವರೆಗೆ ನಿಝಾಮುದ್ದೀನ್ ಮರ್ಕಝ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದವರ ಪೈಕಿ 91 ಮಂದಿ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರಲ್ಲಿ 50 ಮಂದಿ ತಮಿಳುನಾಡಿನವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 9 ಹಾಗೂ ಮಾರ್ಚ್ 10ರಂದು ನಿಝಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಭಾರತೀಯರು ಹಾಗೂ ನೂರಾರು ವಿದೇಶಿಯರು ಭಾಗವಹಿಸಿದ್ದರು ಎಂದು ಅವು ಹೇಳಿವೆ.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪುಣೆಯ ಮಂದಿಯನ್ನು ಮಂಗಳವಾರ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್ ತಿಳಿಸಿ ದ್ದಾರೆ. ಈ ಮಧ್ಯೆ ನಿಝಾಮುದ್ದೀನ್ನಲ್ಲಿ ನಡೆದ ಸಮಾವೇಶಕ್ಕೆ ಹಾಜರಾಗಿದ ಉತ್ತರ ಪ್ರದೇಶದ ಜಾನ್ಪುರ ಇಲ್ಲೆಯ 60 ಮಂದಿಯನ್ನು ಕೂಡಾ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಗೌತಮ್ಬುದ್ಧ ನಗರದ 34 ನಿವಾಸಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರಾದರೂ, ಅವರ್ಯಾರಿಗೂ ರೋಗಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ ಮುಂಜಾಗರೂಕತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆಯೆಂದು ತಿಳಿದುಬಂದಿದೆ.