ಪಿಪಿಇ ಕಿಟ್, ಮಾಸ್ಕ್ಗಳ ಕೊರತೆ: ತಮ್ಮ ಜೀವಗಳ ಬಗ್ಗೆ ಆತಂಕದಲ್ಲಿ ವೈದ್ಯರು
ಫೈಲ್ ಚಿತ್ರ
ಹೊಸದಿಲ್ಲಿ,ಎ.6: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಕೊಂಡಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಪಾಡು ಯಾರಿಗೂ ಬೇಡ. ನಿರಂತರ ಆತಂಕ ಮತ್ತು ಭೀತಿಯ ನಡುವೆಯೇ ಕರ್ತವ್ಯ ನಿರ್ವಹಣೆಗಾಗಿ ಅವರು ತಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ. ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ),ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಗವಸುಗಳಂತಹ ಅಗತ್ಯ ಸಾಧನಗಳ ಕೊರತೆಯಿಂದಾಗಿ ಈ ವೈದ್ಯರಲ್ಲಿ ಇಂದು ತಮ್ಮ ಜೀವದ ಬಗ್ಗೆಯೇ ಆತಂಕ ಮನೆಮಾಡಿದೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತು ಶಂಕಿತರ ಮಹಾಪೂರವೇ ಸರಕಾರಿ ಆಸ್ಪತ್ರೆಗಳತ್ತ ಹರಿದು ಬರುತ್ತಿದೆ. ಮಾಮೂಲಿ ಒಪಿಡಿ ರೋಗಿಗಳ ಆಸ್ಪತ್ರೆ ಭೇಟಿಗಳು ಮುಂದುವರಿದಿವೆ. ಹೀಗಿರುವಾಗ ತಮ್ಮ ಬಳಿಯೇ ಕುಳಿತಿರುವ ಶೀತ ಅಥವಾ ಜ್ವರದಿಂದ ಬಳಲುತ್ತಿರುವ ಮಗು ಅಥವಾ ವಯಸ್ಕರು ಕೊರೋನ ವೈರಸ್ ವಾಹಕರಾಗಿರಬಹುದೇ ಎನ್ನುವುದನ್ನು ತಿಳಿದುಕೊಳ್ಳಲೂ ವೈದ್ಯರಿಗೆ ಸಮಯವಿಲ್ಲ ಎನ್ನುತ್ತಾರೆ ಚಂಢಿಗಡದ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ.ಡಿಂಪಲ್ ಧಾಲಿವಾಲ್ ಶ್ರೀವಾಸ್ತವ.
ರೇಷನ್ ಲೆಕ್ಕದಲ್ಲಿ ನೀಡಲಾಗುತ್ತಿರುವ ಸರ್ಜಿಕಲ್ ಅಥವಾ ಬಟ್ಟೆಯ ಮಾಸ್ಕ್ಗಳನ್ನೇ ಒಗೆದು ಮರುಬಳಸಬೇಕಾದ ಅನಿವಾರ್ಯತೆಯಲ್ಲಿ ವೈದ್ಯರು ಸಿಲುಕಿದ್ದಾರೆ. ಹೀಗಿರುವಾಗ ಅವರು ತಮ್ಮನ್ನು ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ?
ಸರಕಾರಿ ಆಸ್ಪತ್ರೆಗಳ ಕ್ಷಿಪ್ರ ಪ್ರತಿಕ್ರಿಯಾ ತಂಡಗಳು ಪ್ರತಿ ದಿನ ಮೊಹಲ್ಲಾಗಳು, ಕೊಳಗೇರಿಗಳು ಇತ್ಯಾದಿ ಕಡೆಗಳಿಗೆ ಭೇಟಿ ನೀಡಿ ಕೊರೋನ ವೈರಸ್ ಶಂಕಿತರ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ, ಮನೆಗಳಲ್ಲಿ ಕ್ವಾರಂಟೈನ್ನಲ್ಲಿರುವವರ ಮತ್ತು ಶಂಕಿತರ ಸ್ಯಾಂಪಲ್ಗಳನ್ನು ಸಂಗ್ರಹಿಸುತ್ತಿದ್ದಾರೆ. ಧರಿಸಿರುವ ರಕ್ಷಣಾ ಉಡುಪಿನೊಳಗೆ ಬೆವರಿನಿಂದ ಮೈ ತೊಪ್ಪೆಯಾಗುತ್ತಿದ್ದರೂ ಆಹಾರ, ನೀರು ಅವರಿಗೆ ದೊರೆಯುತ್ತಿಲ್ಲ. ಅವಸರಕ್ಕೆ ಬಾತರೂಮ್ಗಳನ್ನು ಉಪಯೋಗಿಸಲೂ ಅವರಿಗೆ ಅವಕಾಶವಿಲ್ಲ. ಮನೆಗೆ ಮರಳಿ ರಾತ್ರಿ ಮಲಗುವಾಗ ಮರುದಿನ ಬೆಳಿಗ್ಗೆ ಎದ್ದಾಗ ಕೊರೋನ ವೈರಸ್ ಲಕ್ಷಣ ತಮ್ಮಲ್ಲಿ ಕಾಣಿಸಿಕೊಳ್ಳದಿರಲಿ ಎನ್ನುವುದಷ್ಟೇ ಅವರು ದೇವರಲ್ಲಿ ಮಾಡಿಕೊಳ್ಳುವ ಪ್ರಾರ್ಥನೆಯಾಗಿದೆ ಎನ್ನುತ್ತಾರೆ ಶ್ರೀವಾಸ್ತವ.
ಕೊರೋನ ವೈರಸ್ ಶಂಕಿತರನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸರಕಾರವು ವೈದ್ಯರಿಗೆ ನಿರ್ದಿಷ್ಟ ನಿರ್ದೇಶಗಳನ್ನು ಹೊರಡಿಸಿಲ್ಲ,ಇನ್ನಾದರೂ ಆ ಕೆಲಸವನ್ನು ಮಾಡಲಿ ಎನ್ನುವುದು ಸರಕಾರಿ ಆಸ್ಪತ್ರೆಗಳ ಸಿಬ್ಬಂದಿಗಳ ಕಳಕಳಿಯಾಗಿದೆ.
ಮನೆಗೆ ಮರಳಿದ ಬಳಿಕ ಈ ವೈದ್ಯಕೀಯ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರನ್ನು ಮಾತನಾಡಿಸುವ ಮುನ್ನ ಕೈಕಾಲುಗಳನ್ನು ಶುಭ್ರವಾಗಿ ತೊಳೆದುಕೊಳ್ಳಲು ಕನಿಷ್ಠ ಒಂದು ಗಂಟೆಯನ್ನಾದರೂ ವ್ಯಯಿಸುತ್ತಿದ್ದಾರೆ. ಕೊರೋನದಿಂದಾಗಿ ಮನೆಗೆಲಸದವರೂ ರಜೆಯಲ್ಲಿರುವುದರಿಂದ ಮಹಿಳಾ ವೈದ್ಯರು,ಸಿಬ್ಬಂದಿ ಮನೆಗೆಲಸಗಳನ್ನೂ ನಿಭಾಯಿಸಬೇಕಾಗುತ್ತದೆ. ಇವೆಲ್ಲ ಕಷ್ಟಗಳಿಗೆ ಕಿರೀಟವಿಟ್ಟಂತೆ ಅವರ ಸಂಬಳವೂ ಸರಿಯಾಗಿ ವಿತರಣೆಯಾಗುತ್ತಿಲ್ಲ. ಅವರ ಬ್ಯಾಂಕ್ ಬ್ಯಾಲೆನ್ಸ್ ಕರಗುತ್ತಲೇ ಇದೆ. ಇದೇ ಸ್ಥಿತಿ ಮುಂದುವರಿದರೆ ತಮ್ಮ ಆರ್ಥಿಕತೆಯ ಗತಿಯೇನು ಎಂಬ ಚಿಂತೆಯೂ ಅವರಿಗೆ ಕಾಡತೊಡಗಿದೆ ಎನ್ನುತ್ತಾರೆ ಶ್ರೀವಾಸ್ತವ.
ಕೃಪೆ: outlookindia.com