ಗುಜರಾತ್: ದ್ವೇಷ ಹರಡುವ ಮಾಧ್ಯಮಗಳು, ದುಷ್ಕರ್ಮಿಗಳನ್ನು ಕಾನೂನಿನ ಮೂಲಕ ಎದುರಿಸುತ್ತಿರುವ ಮುಸ್ಲಿಮರು
ಅಹ್ಮದಾಬಾದ್, ಎ.27: ಗುಜರಾತಿನಲ್ಲಿ ಫೆಬ್ರವರಿಯಲ್ಲಿ ಊಹಿಸಲೂ ಸಾಧ್ಯವಿರದೆ ಇದ್ದದ್ದು ಈಗ ಸಂಭವಿಸುತ್ತಿರುವುದು ಮಾತ್ರವಲ್ಲ,ಚುರುಕನ್ನೂ ಪಡೆದುಕೊಳ್ಳುತ್ತಿದೆ. ತಮ್ಮ ಸಮುದಾಯದ ವಿರುದ್ಧ ಕೋಮುವಾದಿ ಸಂದೇಶಗಳ ಪ್ರಸಾರದಲ್ಲಿ ತೊಡಗಿರುವ ಟಿವಿ ವಾಹಿನಿಗಳು, ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಮುಸ್ಲಿಮರು 400ಕ್ಕೂ ಅಧಿಕ ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಈ ಎಫ್ಐಆರ್ಗಳೊಂದಿಗೆ ಪುರಾವೆಯಾಗಿ ಸ್ಕ್ರೀನ್ ಶಾಟ್ಗಳು, ವೃತ್ತಪತ್ರಿಕೆಗಳ ತುಣುಕುಗಳು ಮತ್ತು ವೀಡಿಯೊ ಕ್ಲಿಪ್ಗಳನ್ನು ಲಗತ್ತಿಸಲಾಗುತ್ತಿದೆ. ಈ ಬಗ್ಗೆ ಹೇಗೆ ಮುಂದುವರಿಯಬೇಕು ಮತ್ತು ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಲು ಬಯಸದಿದ್ದರೆ ಪೊಲೀಸರಿಗೆ ಇ-ದೂರುಗಳನ್ನು ಹೇಗೆ ಸಲ್ಲಿಸುವುದು ಎಂಬ ಬಗ್ಗೆ ಮುಸ್ಲಿಮ್ ವಕೀಲರು ಸಮುದಾಯದ ಸದಸ್ಯರಿಗೆ ಫೇಸ್ಬುಕ್ ಮೂಲಕ ಮಾಹಿತಿಗಳನ್ನು ನೀಡುತ್ತಿದ್ದಾರೆ.
ಮುಸ್ಲಿಮರ ಈ ಅಭಿಯಾನವು ದ್ವೇಷ ಪ್ರಸಾರಕರ ದೊಡ್ಡ ವರ್ಗವೊಂದನ್ನು ತಕ್ಷಣಕ್ಕೆ ಮೌನವಾಗಿಸಿದೆ.
ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡಲು ತಬ್ಲೀಗಿ ಜಮಾಅತ್ನ್ನು ಹೊಣೆಯಾಗಿಸಿ ಮತ್ತು ಆ ನೆಪದಲ್ಲಿ ಇಡೀ ಮುಸ್ಲಿಮ್ ಸಮುದಾಯವನ್ನು ಮಾಧ್ಯಮಗಳು ದೂರುತ್ತಿರುವುದಕ್ಕೆ ಪ್ರತಿಯಾಗಿ ಈ ಅಭಿಯಾನವು ಹುಟ್ಟಿಕೊಂಡಿದೆ. ‘ಅಲ್ಪಸಂಖ್ಯಾಕ ಅಧಿಕಾರ ಮಂಚ್’ನ ಪ್ರಮುಖರಾಗಿರುವ ವಕೀಲ ಶಂಶಾದ್ ಪಠಾಣ್ ಅವರು ಪೊಲೀಸರಿಗೆ ದೂರು ಸಲ್ಲಿಸುವಂತೆ ಸಮುದಾಯಕ್ಕೆ ಪ್ರೇರಣೆ ನೀಡಿದ್ದರು. ಮೊದಲ ಪ್ರಕರಣ ಆನಂದ ಜಿಲ್ಲೆಯಲ್ಲಿ ದಾಖಲಾಗಿದ್ದು,ಕ್ರಮೇಣ ರಾಜ್ಯಾದ್ಯಂತ ದೂರುಗಳು ದಾಖಲಾಗುತ್ತಿವೆ.