ಉ.ಪ್ರ.: ಸಿಎಎ ವಿರೋಧಿ ಪ್ರತಿಭಟನೆ; 53 ಮಂದಿಯಗೆ ಜಪ್ತಿ ನೋಟಿಸ್ಗೆ ತಡೆ
ಹೊಸದಿಲ್ಲಿ, ಎ. 29: ಡಿಸೆಂಬರ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಸರಕಾರದ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದ ಆರೋಪ ಎದುರಿಸುತ್ತಿರುವ 53 ಮಂದಿಯ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕಾಗಿ ನೋಟಿಸ್ ಜಾರಿಯನ್ನು ತಡೆಹಿಡಿಯಲು ಉತ್ತರಪ್ರದೇಶ ಸರಕಾರದ ಶನಿವಾರ ನಿರ್ಧರಿಸಿದೆ. ಗಲಭೆಯಿಂದ ಉಂಟಾಗಿರುವ 1.41 ಕೋಟಿ ರೂ. ಹಣವನ್ನು ವಸೂಲು ಮಾಡುವ ಪ್ರಕ್ರಿಯೆಯನ್ನು ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದೆ ಎಂದು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್ ತಿಳಿಸಿದ್ದಾರೆ.
ಆದರೆ ಲಾಕ್ಡೌನ್ ಮುಕ್ತಾಯಗೊಂಡ ಬಳಿಕ ಖಂಡಿತವಾಗಿಯೂ ಕ್ರಮವನ್ನು ಕೈಗೊಳ್ಳಲಾಗುವುದು ಎಂದವರು ಹೇಳಿದರು.
ಲಕ್ನೋದ ಖಾದ್ರಾ, ಪರಿವರ್ತನ್ ಚೌಕ್, ಠಾಕೂರ್ಗಂಜ್ ಹಾಗೂ ಕೈಸರ್ಭಾಗ್ ಪ್ರದೇಶಗಳಲ್ಲಿ ಡಿಸೆಂಬರ್ 20ರಂದು ನಡೆದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. ಗಲಭೆಯಿಂದ ಆಸ್ತಿಪಾಸ್ತಿಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸುವಂತೆ ಹಾಗೂ ಹಿಂಸಾಚಾರದಲ್ಲಿ ಶಾಮೀಲಾದವರಿಂದ ನಷ್ಟದ ಹಣವನ್ನು ವಸೂಲಿ ಮಾಡುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದರು.