ಲಾಕ್ಡೌನ್: ತಮಿಳುನಾಡಿನಾದ್ಯಂತ ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯಗಳು
ಚೆನ್ನೈ,ಮೇ 3: ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸೆಗಳು ಹೆಚ್ಚಿರುವಂತೆ ತಮಿಳುನಾಡಿನಾದ್ಯಂತ ಜಾತಿ ಹಿಂಸಾಚಾರಗಳು ಹೆಚ್ಚಾಗತೊಡಗಿವೆ ಎಂದು ಮಧುರೈನ ಮಾನವ ಹಕ್ಕುಗಳ ಸಂಘಟನೆ ‘ಎವಿಡೆನ್ಸ್’ನ ಕಾರ್ಯಕಾರಿ ನಿರ್ದೇಶಕ ಎ.ಕದಿರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ರಾಜ್ಯದಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಎಂದಿಗಿಂತ ಹೆಚ್ಚಾಗಿವೆ. ಆದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಕೋವಿಡ್-19 ಪ್ರಕರಣಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ಜಾತಿ ಹಿಂಸಾಚಾರಗಳ ಬಗ್ಗೆ ಗೊತ್ತೇ ಆಗುತ್ತಿಲ್ಲ ಎಂದ ಅವರು, ಒಂದು ತಿಂಗಳಲ್ಲಿ ದಲಿತರ ವಿರುದ್ಧ ದೌರ್ಜನ್ಯದ ಕನಿಷ್ಠ 25 ಪ್ರಕರಣಗಳು ವರದಿಯಾಗಿವೆ. ಇದು ಇಂತಹ ಪ್ರಕರಣಗಳಲ್ಲಿ ಶೇ.40ರಷ್ಟು ಏರಿಕೆಯಾಗಿರುವುದನ್ನು ಸೂಚಿಸುತ್ತಿದೆ. ಹಿಂಸಾಚಾರದ ಸುಮಾರು 150 ಘಟನೆಗಳು ನಡೆದಿವೆ. ದೂರು ಸಹ ದಾಖಲಾಗದ ಇನ್ನು ಹಲವಾರು ಪ್ರಕರಣಗಳು ಖಂಡಿತವಾಗಿಯೂ ನಡೆದಿವೆ ಎಂದರು.
ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವ ಲಾಕ್ಡೌನ್ ಅವಧಿಯಲ್ಲಿಯೂ 5,10 ಮತ್ತು 20 ಜನರ ಗುಂಪುಗಳು ದಲಿತರ ಮೇಲೆ ಹಿಂಸೆಯನ್ನು ನಡೆಸಲು ಬರುತ್ತಿವೆ ಎಂದರು.
ಮಾ.29ರಂದು ತಿರುವಣ್ಣಾಮಲೈನ ಗ್ರಾಮವೊಂದರಲ್ಲಿ ಮೇಲ್ಜಾತಿಯ ಯುವತಿಯನ್ನು ಪ್ರಿತಿಸಿದ್ದಕ್ಕಾಗಿ ಸುಧಾಕರ ಎಂಬ ದಲಿತ ಯುವಕನನ್ನು ಆಕೆಯ ತಂದೆ ಮತ್ತು ಸಂಬಂಧಿ ಕೊಲೆ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ಜಿಲ್ಲೆಯ ಚೆಂಗಂ ಗ್ರಾಮದಲ್ಲಿ ಮೇಲ್ಜಾತಿಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ದಲಿತ ಯುವಕನನ್ನು ಪೊಲೀಸನೋರ್ವ ಥಳಿಸಿ ಅವಮಾನಿಸಿದ್ದಾನೆ. ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾದ ಬಳಿಕ ಸದ್ರಿ ಪೊಲೀಸನನ್ನು ಅಮಾನತುಗೊಳಿಸಲಾಗಿದೆ. ಲಾಕ್ಡೌನ್ಗೆ ಮುನ್ನ ದುಷ್ಕರ್ಮಿಗಳು ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ್ದನ್ನು ಚಿತ್ರೀಕರಿಸಿದ್ದ ವೇಲಿಚಂ ಟಿವಿಯ ವರದಿಗಾರ ಆಧಿ ಸುರೇಶ್ ಅವರ ಮೇಲೆ ಎ.23ರಂದು ಗುಂಪೊಂದು ಹಲ್ಲೆ ನಡೆಸಿತ್ತು. ಇವು ಕೆಲವು ಉದಾಹರಣೆಗಳಷ್ಟೇ.
ಎ.30ರಂದು ಕುಡ್ಡಲೂರಿನಲ್ಲಿ ಅಂಬೇಡ್ಕರ್ ವಿಗ್ರಹವನ್ನು ಭಗ್ನಗೊಳಿಸಲಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ರಾಜಕೀಯ ಪಕ್ಷ ವಿಕೆಸಿಯ ಸ್ಥಳೀಯ ಘಟಕವು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ತಮಿಳುನಾಡಿನಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಜಾತಿವಾದಿ ಶಕ್ತಿಗಳು ಕೊರೋನ ವೈರಸ್ಗೂ ಹೆದರುತ್ತಿಲ್ಲ ಮತ್ತು ಅವರು ದಲಿತರ ವಿರುದ್ಧ ಗೂಂಡಾಗಿರಿ ನಡೆಸುತ್ತಲೇ ಇದ್ದಾರೆ, ಈಗಂತೂ ರಾಜಾರೋಷವಾಗಿ ನಡೆಸುತ್ತಿರುವಂತಿದೆ ಎಂದು ವಿಕೆಸಿಯ ಉಪ ಪ್ರಧಾನ ಕಾರ್ಯದರ್ಶಿ ವಣ್ಣಿ ಅರಸು ಹೇಳಿದರು.
ತಮಿಳುನಾಡಿನಾದ್ಯಂತ ಇಂತಹ ಹಲವಾರು ಘಟನೆಗಳು ನಡೆದಿವೆ. ಜಾತಿವಾದಿಗಳು ದಲಿತರ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಕೊರೋನ ವೈರಸ್ ಮತ್ತು ಲಾಕ್ಡೌನ್ ಅವರಿಗೆ ನೆಪಗಳಾಗಿವೆ ಎಂದು ಹೇಳಿದ ಕದಿರ್,ದೌರ್ಜನ್ಯಗಳನ್ನು ನಡೆಸುತ್ತಿರುವವರು ದಲಿತರ ಮೇಲೆ ಹಲ್ಲೆ ನಡೆಸಲೆಂದೇ ಕರ್ಫ್ಯೂವನ್ನು ಉಲ್ಲಂಘಿಸುತ್ತಿದ್ದಾರೆ. ಅವರಿಗೆ ಕೊರೋನ ವೈರಸ್ಗಿಂತ ಜಾತಿಯೇ ಮುಖ್ಯವಾಗಿದೆ ಎಂದರು.