ಸಾರ್ವಜನಿಕ ಸಾರಿಗೆ ಶೀಘ್ರ ಪುನರಾರಂಭ: ನಿತಿನ್ ಗಡ್ಕರಿ
ಹೊಸದಿಲ್ಲಿ,ಮೇ 6: ಸಾರ್ವಜನಿಕ ಸಾರಿಗೆ ಸೇವೆಗಳು ಶೀಘ್ರವೇ ಪುನರಾರಂಭಗೊಳ್ಳಬಹದು ಮತ್ತು ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಸುರಕ್ಷಿತ ಅಂತರ ಸೇರಿದಂತೆ ಮಾರ್ಗಸೂಚಿಗಳನ್ನು ಸರಕಾರವು ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ,ಹೆದ್ದಾರಿಗಳು ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಬುಧವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಬಸ್ ಮತ್ತು ಕಾರು ನಿರ್ವಾಹಕರ ಒಕ್ಕೂಟದ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಸಾರಿಗೆ ಪುನರಾರಂಭವು ಸಾರ್ವಜನಿಕರಲ್ಲಿ ವಿಶ್ವಾಸವನ್ನು ತುಂಬುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದರು. ಆದರೆ ಬಸ್ಗಳು ಮತು ಕಾರುಗಳ ಸಂಚಾರದ ಸಮಯದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಮತ್ತು ಮಾಸ್ಕ್ ಧಾರಣೆಯಂತಹ ಎಲ್ಲ ಸುರಕ್ಷತಾ ಕ್ರಮಗಳ ಪಾಲನೆಯ ಬಗ್ಗೆ ಎಚ್ಚರಿಕೆ ನೀಡಿದರು.
ಪ್ರಯಾಣಿಕ ಸಾರಿಗೆ ಉದ್ಯಮಕ್ಕೆ ಪರಿಹಾರ ಬೇಡಿಕೆಯ ಕುರಿತಂತೆ ಗಡ್ಕರಿ,ಸರಕಾರಕ್ಕೆ ಅವರ ಸಮಸ್ಯೆಗಳು ಚೆನ್ನಾಗಿ ಗೊತ್ತಿದೆ ಮತ್ತು ಅವರ ಸಮಸ್ಯೆಯನ್ನು ನೀಗಿಸಲು ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದರು.
ಕೊರೋನ ವೈರಸ್ ಬಿಕ್ಕಟ್ಟನ್ನು ಜಾಗತಿಕ ಮಾರುಕಟ್ಟೆಯಲ್ಲಿ ವ್ಯವಹಾರ ವಿಸ್ತರಣೆಗೆ ಅವಕಾಶವನ್ನಾಗಿ ಬಳಸಿಕೊಳ್ಳುವಂತೆ ಹೂಡಿಕೆದಾರರು ಮತ್ತು ಉದ್ಯಮಕ್ಕೆ ಸೂಚಿಸಿದ ಅವರು,ಕೊರೋನ ವೈರಸ್ ಪಿಡುಗಿನಿಂದಾಗಿ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ. ಚೀನಾದೊಂದಿಗೆ ವ್ಯವಹರಿಸಲು ಯಾರೂ ಬಯಸುತ್ತಿಲ್ಲವಾದ್ದರಿಂದ ಈ ಬಿಕ್ಕಟ್ಟನ್ನು ಪರೋಕ್ಷ ವರದಾನವೆಂದು ನಾವು ಪರಿಗಣಿಸಬೇಕಿದೆ. ಚೀನಾದಿಂದ ಹೊರಗೆ ಹೂಡಿಕೆಗಾಗಿ ಜಪಾನಿನ ಪ್ರಧಾನಿ ತನ್ನ ದೇಶದಲ್ಲಿ ಕೈಗಾರಿಕೆಗಳಿಗೆ ಅನುಕೂಲಗಳನ್ನು ಕಲ್ಪಿಸುತ್ತಿದ್ದಾರೆ. ಇದು ಭಾರತದ ಆರ್ಥಿಕತೆಯನ್ನು ಹೆಚ್ಚಿಸಲು ಒಂದು ಸದವಕಾಶವಾಗಿದೆ ಎಂದು ಹೇಳಿದರು.