ಟಿಎಂಸಿ ಕಾರ್ಯಕರ್ತರು ನನ್ನ ವಾಹನ ಧ್ವಂಸಗೈದಿದ್ದಾರೆ: ಬಂಗಾಳ ಬಿಜೆಪಿ ಅಧ್ಯಕ್ಷ ಘೋಷ್ ಆರೋಪ
ಕೋಲ್ಕತಾ, ಜು.1: ಟಿಎಂಸಿ ಬೆಂಬಲಿಗರು ನನಗೆ ನಿಂದಿಸಿಲ್ಲದ್ದಲ್ಲದೆ ನನ್ನ ವಾಹನವನ್ನು ಧ್ವಂಸಗೈದಿದ್ದಾರೆ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಬುಧವಾರ ಆರೋಪಿಸಿದ್ದಾರೆ.
ಘೋಷ್ ಬೆಳಗ್ಗಿನ ವಾಕಿಂಗ್ನಲ್ಲಿ ತೊಡಗಿದ್ದಾಗ ನ್ಯೂ ಟೌನ್ನ ರಾಜರ್ಹತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆೆ. ಘೋಷ್ ವಾಕಿಂಗ್ ಮುಗಿಸಿದ ಬಳಿಕ ಸ್ಥಳೀಯರೊಂದಿಗೆ ಚಾ ಪೆ ಚರ್ಚಾ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, "ಟಿಎಂಸಿ ಕಾರ್ಯಕರ್ತರು ನನ್ನ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದರು. ನಾನೀಗ ರಾಜರ್ಹಟ್ನಲ್ಲಿದ್ದೇನೆ. ಎಂದಿನಂತೆ ನಾನು ಬೆಳಗ್ಗಿನ ವಾಕಿಂಗ್ಗೆ ಹೋಗಿದ್ದೆ. ನಮ್ಮ ಕಾರ್ಯಕರ್ತರನ್ನು ಕೊಚ್ಪುರ್ಕರ್ ಹಳ್ಳಿಯ ಟೀ ಅಂಗಡಿಯಲ್ಲಿ ಭೇಟಿಯಾಗುವ ಕಾರ್ಯಕ್ರಮವಿತ್ತು. ಅಲ್ಲಿಗೆ ನಾನು ತಲುಪುವ ಮೊದಲೇ ಟಿಎಂಸಿ ಬೆಂಬಲಿಗರು ನನ್ನನ್ನು ತಡೆದು ನಿಂದಿಸತೊಡಗಿದರು ಹಾಗೂ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದರು. ಆ ಪ್ರದೇಶಕ್ಕೆ ನಾನು ಭೇಟಿ ನೀಡುವ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಅವರು ಏನೂ ಮಾಡಲಿಲ್ಲ''ಎಂದು ಘೋಷ್ ಆರೋಪಿಸಿದರು.
ಇದೇ ವೇಳೆ ಕಾಂಗ್ರೆಸ್ನ ಲೋಕಸಭಾ ಸಂಸದ ಅಧಿರ್ ಚೌಧರಿ ಅವರು ಘೋಷ್ ಮೇಲಾಗಿರುವ ದಾಳಿಯನ್ನು ಖಂಡಿಸಿದರು. ಪಶ್ಚಿಮಬಂಗಾಳದಲ್ಲಿ ವಿಪಕ್ಷ ನಾಯಕರಿಗೆ ಯಾವುದೇ ಭದ್ರತೆ ಇಲ್ಲ ಎಂದು ಆರೋಪಿಸಿದರು. ಆದರೆ, ಟಿಎಂಸಿ ಈ ಆರೋಪವನ್ನು ನಿರಾಕರಿಸಿದೆ.