‘ಕುಲಭೂಷಣ್ ಯಾದವ್ ಭಾರೀ ಒತ್ತಡದಲ್ಲಿದ್ದಂತೆ ಕಾಣುತ್ತಾರೆ’: ರಾಜತಾಂತ್ರಿಕ ಭೇಟಿ ಬಳಿಕ ಸಚಿವಾಲಯ
‘ಬೆದರಿಸುವ ರೀತಿಯಲ್ಲಿ ನಿಂತಿದ್ದ ಪಾಕ್ ಅಧಿಕಾರಿಗಳು’
ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಯಾದವ್ ರ ಸುಲಲಿತ ರಾಜತಾಂತ್ರಿಕ ಭೇಟಿಗೆ ಪಾಕಿಸ್ತಾನ ಅವಕಾಶ ನೀಡಿರಲಿಲ್ಲ ಮತ್ತು ಜಾಧವ್ ಭಾರೀ ಒತ್ತಡದಲ್ಲಿದ್ದಂತೆ ಕಂಡುಬಂದರು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕುಲಭೂಷಣ್ ಯಾದವ್ ರಾಜತಾಂತ್ರಿಕ ಭೇಟಿಗೆ ಭಾರತ ಪಡೆದುಕೊಂಡ ಎರಡನೆ ಅವಕಾಶ ಇದಾಗಿದೆ.
“ಭಾರತದ ಕಡೆಯಿಂದ ತೀವ್ರ ಪ್ರತಿಭಟನೆ ವ್ಯಕ್ತವಾದರೂ ಪಾಕಿಸ್ತಾನಿ ಅಧಿಕಾರಿಗಳು ಯಾದವ್ ಮತ್ತು ಭಾರತೀಯ ಅಧಿಕಾರಿಗಳ ಸಮೀಪವೇ ಬೆದರಿಸುವ ಶೈಲಿಯಲ್ಲಿ ನಿಂತಿದ್ದರು. ಯಾದವ್ ಭಾರೀ ಒತ್ತಡದಲ್ಲಿದ್ದಾರೆ ಎನ್ನುವುದು ನೋಡುವಾಗಲೇ ತಿಳಿಯಿತು” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಕಾನೂನಾತ್ಮಕ ಪ್ರತಿನಿಧಿಯ ನೇಮಕಕ್ಕೆ ಸಂಬಂಧಿಸಿ ಯಾದವ್ ಲಿಖಿತ ಒಪ್ಪಿಗೆಯನ್ನು ಪಡೆಯಲು ಕೂಡ ಪಾಕಿಸ್ತಾನಿ ಅಧಿಕಾರಿಗಳು ಅವಕಾಶ ನಿರಾಕರಿಸಿದರು ಎಂದು ಹೇಳಿದೆ.
Next Story