ಅಸ್ಸಾಂನಲ್ಲಿ ನೆರೆ: 81 ಮಂದಿ ಸಾವು, 54 ಲಕ್ಷ ಸಂತ್ರಸ್ತರು
ಗುವಾಹಟಿ, ಜು. 19: ನೆರೆ ಹಾನಿ ನಿರ್ವಹಣೆಗೆ ಅಸ್ಸಾಂಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಭರವಸೆ ನೀಡಿದ್ದಾರೆ. ನೆರೆಯಿಂದಾಗಿ ಅಸ್ಸಾಂನ 30 ಜಿಲ್ಲೆಗಳಲ್ಲಿ 81 ಜನರು ಸಾವನ್ನಪ್ಪಿದ್ದಾರೆ ಹಾಗೂ 54 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.
ರಾಜ್ಯದಲ್ಲಿ ನೆರೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಹಾಗೂ ಜನರ ಜೊತೆ ತಾವು ಇರುವುದಾಗಿ ಹೇಳಿದ್ದಾರೆ. ಕೊರೋನಾ ಪರಿಸ್ಥಿತಿ ಹಾಗೂ ಆಯಿಲ್ ಇಂಡಿಯಾದ ಬಾಘ್ಜಾನ್ ಅನಿಲ ಬಾವಿಯ ಬೆಂಕಿ ನಂದಿಸಲು ನಡೆಯುತ್ತಿರುವ ಪ್ರಯತ್ನದ ಬಗ್ಗೆ ಕೂಡ ಪ್ರಧಾನಿ ಅವರು ಸರ್ಬಾನಂದ ಸೋನೊವಾಲ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಅಸ್ಸಾಂನ ನೆರೆ ಪರಿಸ್ಥಿತಿ ಬಗ್ಗೆ ಹಾಗೂ ಬಾಘ್ಜಾನ್ ತೈಲ ಬಾವಿಯ ಬೆಂಕಿ ನಂದಿಸಲು ಕ್ರಮ ಕೈಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನನ್ನೊಂದಿಗೆ ಫೋನ್ನಲ್ಲಿ ಮಾತುಕತೆ ನಡೆಸಿದ್ದಾರೆ. ಜನರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಸರ್ಬಾನಂದ ಸೋನವಾಲ ಟ್ವೀಟ್ ಮಾಡಿದ್ದಾರೆ.