ರಾಜೀವ್ ಗಾಂಧಿ ಹತ್ಯೆ ಆರೋಪಿ ನಳಿನಿ ಆತ್ಮಹತ್ಯೆಗೆ ಯತ್ನ
ಚೆನ್ನೈ, ಜು. 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ ಶ್ರೀಹರನ್ ವೆಲ್ಲೂರು ಕಾರಾಗೃಹದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಬ್ಲಾಕ್ಮೇಲ್ ಅಥವಾ ಬೆದರಿಕೆಯಂತಿದೆ. ನಳಿನಿ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ ಎಂದು ತಮಿಳುನಾಡು ಬಂಧಿಖಾನೆ ಇಲಾಖೆ ವರಿಷ್ಠ ಸುನೀಲ್ ಕುಮಾರ್ ಸಿಂಗ್ ಸೋಮವಾರ ಹೇಳಿದ್ದಾರೆ. ‘‘ನಳಿನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆಕೆಯ ಕೊಠಡಿಯಲ್ಲಿರುವ ಇನ್ನೋರ್ವ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ ದೂರು ಸಲ್ಲಿಸಿದ್ದಳು. ಈ ಆರೋಪದ ಬಗ್ಗೆ ಕಾರಾಗೃಹ ತನಿಖೆ ನಡೆಸುತ್ತಿರುವ ಸಂದರ್ಭ ಮಹಿಳೆಯನ್ನು ಸ್ಥಳಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಳಿನಿ ಬೆದರಿಕೆ ಒಡ್ಡಿದ್ದಾಳೆ’’ ಎಂದು ಸಿಂಗ್ ಹೇಳಿದ್ದಾರೆ. ಆದರೆ ನಳಿನಿ ಪರ ವಕೀಲ ಪಿ. ಪುಗಳೆಂದಿ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ನಳಿನಿಗೆ ಕಾರಾಗೃಹದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆದುದರಿಂದ ನಳಿನಿಯನ್ನು ಇನ್ನೊಂದು ಕಾರಾಗೃಹಕ್ಕೆ ವರ್ಗಾಯಿಸಲು ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಳಿನಿಯ ಜೀವಕ್ಕೆ ಅಪಾಯವಿದೆ ಎಂದು ಪ್ರತಿಪಾದಿಸಿರುವ ಪುಗಳೇಂದಿ, ನಳಿನಿಯನ್ನು ಚೆನ್ನೈ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಬಂಧಿಖಾನೆ ಪ್ರಾಧಿಕಾರ ಹಾಗೂ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದಿದ್ದಾರೆ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಗೆ ಮರಣ ದಂಡನೆ ವಿಧಿಸಲಾಗಿದೆ.