ವಯಲಿನ್ ಕಲಾವಿದ ಬಾಲಭಾಸ್ಕರ್ ಸಾವು ಪ್ರಕರಣ: ಸಿಬಿಐ ತನಿಖೆ ಆರಂಭ
ತಿರುವನಂತಪುರ,ಜು.30: ಖ್ಯಾತ ವಯಲಿನ್ ಕಲಾವಿದ ಬಾಲಭಾಸ್ಕರ್ ಹಾಗೂ ಅವರ 18 ತಿಂಗಳ ಪುತ್ರಿ ಎರಡು ವರ್ಷಗಳ ಹಿಂದೆ ಕಾರು ಅವಘಡದಲ್ಲಿ ಮಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ಕೈಗೆತ್ತಿಕೊಂಡಿದೆ.
ಈ ಪ್ರಕರಣದ ಕೆಲವು ಶಂಕಿತರಿಗೆ ಚಿನ್ನ ಕಳ್ಳಸಾಗಾಣಿಕೆಯ ಜೊತೆ ನಂಟಿದೆ ಹಾಗೂ ಬಾಲಭಾಸ್ಕರ್ ಸಾವಿನ ತರುವಾಯ ಅವರ ಬ್ಯಾಂಕ್ ಖಾತೆಯಿಂದ ಸಂದೇಹಾಸ್ಪದವಾಗಿ ಹಣ ವರ್ಗಾವಣೆಯಾಗಿವೆ ಎಂದು ಮೃತ ಕಲಾವಿದನ ಹೆತ್ತವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿದ ಅಹವಾಲಿನಲ್ಲಿ ಆಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 2019ರ ಡಿಸೆಂಬರ್ನಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ನಿರ್ಧರಿಸಿತ್ತು.
2018ರ ಸೆಪ್ಟೆಂಬರ್ 25ರಂದು ಎಂಬಲ್ಲಿ ನಡೆದ ಕಾರು ಅವಘಡದಲ್ಲಿ ಬಾಲಭಾಸ್ಕರ್ ಹಾಗೂ ಅವರ ಪುತ್ರಿ ಸಾವನ್ನಪ್ಪಿದ್ದರು. ಬಾಲಭಾಸ್ಕರ್, ಅವರ ಪತ್ನಿ ಲಕ್ಷ್ಮಿ ಹಾಗೂ ಪುತ್ರಿ ತೇಜಸ್ವಿನಿ ಬಾಲಾ ಅವರು ಕೇರಳದ ತ್ರಿಶೂರು ಜಿಲ್ಲೆಯಲ್ಲಿರುವ ದೇವಾಲಯವನ್ನು ಸಂದರ್ಶಿಸಿ ವಾಪಾಸಾಗುತ್ತಿದ್ದಾಗ, ತಿರುವನಂತಪುರ ಬಳಿ ಪಳ್ಳಿಪುರಂ ಎಂಬಲ್ಲಿ ಅವರಿದ್ದ ಕಾರು ಮರವೊಂದಕ್ಕೆ ಢಿಕ್ಕಿ ಹೊಡೆದಿತ್ತು. ತೇಜಸ್ವಿನಿ ಬಾಲಾ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಮೃತಪಟ್ಟರೆ, ಬಾಲಭಾಸ್ಕರ್ ಹಾಗೂ ಅವರ ಪತ್ನಿ ಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ದರು. ಲಕ್ಷ್ಮಿ ಆನಂತರ ಚೇತರಿಸಿಕೊಂಡಿದ್ದರು. ಬಾಲಭಾಸ್ಕರ್ ಅವರು ಅಕ್ಟೋಬರ್ 2ರಂದು ಹೃದಯಘಾತದಿಂದ ಮೃತಪಟ್ಟಿದ್ದರು.
ಬಾಲಭಾಸ್ಕರ್ ಅವರ ನಿಕಟವರ್ತಿ ಹಾಗೂ ಚಿನ್ನ ಕಳ್ಳಸಾಗಣೆ ಪ್ರಕರಣವೊಂದರ ಆರೋಪಿ ಪ್ರಕಾಶ್ ತಂಪಿ ಹಾಗೂ ಅವಘಡದಲ್ಲಿ ಗಾಯಗೊಂಡಿದ್ದ ಚಾಲಕ ಅರ್ಜುನ್ ಅವರು ಅವಘಡ ನಡೆದಾಗ ಬಾಲಭಾಸ್ಕರ್ ಅವರೇ ವಾಹನ ಚಲಾಯಿಸುತ್ತಿದ್ದರೆಂದು ತಿಳಿಸಿದ್ದಾರೆ. ಆದರೆ ವಾಸ್ತವವಾಗಿ ಅರ್ಜುನ್ ಕಾರು ಚಲಾಯಿಸುತ್ತಿದ್ದರೆಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.