‘‘ಸತ್ಯವೇ ಗೆಲ್ಲುತ್ತದೆ’’:ಸುಶಾಂತ್ ಕುಟುಂಬದಿಂದ ವಂಚನೆಯ ಆರೋಪಕ್ಕೆ ಒಳಗಾಗಿರುವ ರಿಯಾ ಪ್ರತಿಕ್ರಿಯೆ
ಹೊಸದಿಲ್ಲಿ, ಜು.31: ನಟ ಸುಶಾಂತ್ ರಜಪೂತ್ ಕುಟುಂಬದಿಂದ ವಂಚನೆ ಹಾಗೂ ಕಿರುಕುಳದ ಆರೋಪವನ್ನು ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಕೊನೆಗೂ ಇಂದು ಮೌನ ಮುರಿದಿದ್ದಾರೆ. ರಿಯಾ ಅವರ ವಕೀಲರು ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಇತ್ತೀಚೆಗೆ ರಿಯಾ ಚಕ್ರವರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ರಿಯಾ, ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾಳೆ ಹಾಗೂ ಆತನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.
"ನನಗೆ ದೇವರು ಹಾಗೂ ನ್ಯಾಯಾಲಯದ ಮೇಲೆ ಅಪಾರ ನಂಬಿಕೆ ಇದೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ದೃಶ್ಯ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸಾಕಷ್ಟು ಭಯಾನಕ ಸಂಗತಿಗಳನ್ನು ಹೇಳಲಾಗುತ್ತಿದ್ದರೂ ನನ್ನ ವಕೀಲರ ಸಲಹೆ ಮೇರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ದೂರ ಉಳಿದಿದ್ದೇನೆ. ಈ ವಿಚಾರ ನ್ಯಾಯಾಲಯದಲ್ಲಿದೆ’’ ಎಂದು ರಿಯಾ ವಕೀಲ ಸತೀಶ್ ಮಾನ್ ಶಿಂಧೆ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ರಿಯಾ ಹೇಳಿಕೆ ನೀಡಿದ್ದಾರೆ.