ಅಕ್ಟೋಬರ್-ನವೆಂಬರ್ನಲ್ಲಿ ಬಿಹಾರ ಚುನಾವಣೆ ನಡೆಸದಂತೆ ಚು.ಆಯೋಗಕ್ಕೆ ಎನ್ಡಿಎ ಮೈತ್ರಿಪಕ್ಷ ಎಲ್ಜೆಪಿ ಮನವಿ!
ಹೊಸದಿಲ್ಲಿ, ಜು.31: ಬಿಜೆಪಿಯ ಮೈತ್ರಿಕೂಟ ಲೋಕ ಜನಶಕ್ತಿ ಪಾರ್ಟಿ(ಎಲ್ಜೆಪಿ)ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅಕ್ಟೋಬರ್-ನವೆಂಬರ್ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಸದಂತೆ ಮನವಿ ಮಾಡಿದೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಕೋವಿಡ್-19 ಬಿಕ್ಕಟ್ಟನ್ನು ನಿಗ್ರಹಿಸಲು ಹಾಗೂ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಹಾರಕ್ಕಾಗಿ ಬಳಸಿಕೊಳ್ಳಬೇಕಾಗಿದೆ. ಈ ಸಮಯದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಎಲ್ಜೆಪಿ ತಿಳಿಸಿದೆ.
ಕೊರೋನ ವೈರಸ್ ಈಗಾಗಲೇ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ಆರೋಗ್ಯ ತಜ್ಞರ ಪ್ರಕಾರ ಇದು ಬಿಹಾರದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ಉಗ್ರಸ್ವರೂಪ ಪಡೆಯಲಿದೆ. ಜನರ ಜೀವವನ್ನು ಉಳಿಸುವುದು ನಮ್ಮ ಆದ್ಯತೆಯಾಗಬೇಕಾಗಿದೆಯೇ ಹೊರತು ಚುನಾವಣೆ ನಡೆಸುವುದಲ್ಲ ಎಂದು ಎಲ್ಜಿಪಿ ತಿಳಿಸಿದೆ.
ಎಲ್ಜೆಪಿಯ ನಿಲುವು ಬಿಜೆಪಿಯ ಇನ್ನೊಂದು ಪ್ರಮುಖ ಮೈತ್ರಿಪಕ್ಷ ಜೆಡಿಯು ನಿಲುವಿಗಿಂತ ಸಂಪೂರ್ಣ ವಿರುದ್ಧವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವುದಕ್ಕೆ ಒಲವು ಹೊಂದಿದ್ದು, ಪೂರ್ವ ತಯಾರಿಯಾಗಿ ಸಂಘಟನಾತ್ಮಕ ಸಭೆಗಳನ್ನು ನಡೆಸುತ್ತಿದ್ದಾರೆ.