ಕೊರೋನ ಹರಡುವಿಕೆಗೆ ನಿರ್ದಿಷ್ಟ ಸಮುದಾಯವನ್ನು ದೂರುವುದು ಸರಿಯಲ್ಲ: ಹರ್ಯಾಣ ಸಿಎಂ ಖಟ್ಟರ್
ಹೊಸದಿಲ್ಲಿ: ಮಾರ್ಚ್ ತಿಂಗಳಲ್ಲಿ ದಿಲ್ಲಿಯಲ್ಲಿ ತಬ್ಲೀಗಿ ಜಮಾತ್ ಕಾರ್ಯಕ್ರಮ ನಡೆದಿದೆ ಎಂಬ ಒಂದೇ ಕಾರಣಕ್ಕೆ ದೇಶದಲ್ಲಿ ಕೋವಿಡ್ 19 ಸೋಂಕು ಹರಡಿರುವುದಕ್ಕೆ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ದೂರುವುದು ಸರಿಯಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿದ್ಧಾರೆ.
ಕೋವಿಡ್-19 ಸೋಂಕಿನ ಮೂಲ ಚೀನಾ ಹಾಗೂ ಅದು ಜಮಾತಿ ಮೂಲ ಹೊಂದಿಲ್ಲ ಎಂದು ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇವಲ ತಬ್ಲೀಗಿ ಜಮಾತ್ ಸಭೆಯನ್ನೇ ಪ್ರತ್ಯೇಕ ದೃಷ್ಟಿಕೋನದಿಂದ ನೋಡಬಾರದು, ಹರ್ಯಾಣ ಸೇರಿದಂತೆ ದೇಶದ ಎಲ್ಲಾ ಕಡೆಗಳ ಜನರೂ ಅದರಲ್ಲಿ ಭಾಗವಹಿಸಿದ್ದರು. ಕೆಲ ವದಂತಿಗಳನ್ನು ಕೂಡ ಹರಡಲಾಯಿತು, ನಾವು ಎಲ್ಲಾ ಧರ್ಮಗಳ ಸ್ಥಾನೀಯ ಮುಖ್ಯಸ್ಥರ ಸಭೆ ನಡೆಸಿ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವಂತೆ ಸೂಚಿಸಿದ್ದೆವು ಎಂದು ಖಟ್ಟರ್ ಹೇಳಿದರು.
ಇತ್ತೀಚೆಗೆ ಹಿಸಾರ್ನಲ್ಲಿ ನಡೆದ ವಿವಾಹ ಸಮಾರಂಭವೊಂದರ ಕಾರಣ 50ರಿಂದ 60 ಜನರಿಗೆ ಸೋಂಕು ತಗಲಿರುವ ಕುರಿತಂತೆಯೂ ಉಲ್ಲೇಖಿಸಿದ ಅವರು ತಬ್ಲೀಗಿಗಳನ್ನೇ ದೂರುವುದು ಸರಿಯಲ್ಲ ಎಂದಿದ್ದಾರೆ.