ಖ್ಯಾತ ರಂಗಕರ್ಮಿ ಇಬ್ರಾಹೀಂ ಅಲ್ಕಾಝಿ ನಿಧನ
ಹೊಸದಿಲ್ಲಿ, ಆ.4: ಆಧುನಿಕ ರಂಗಭೂಮಿಯ ಜನಕರೆಂದೇ ಪರಿಗಣಿಸಲಾಗಿರುವ,ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ)ದ ಪ್ರಪ್ರಥಮ ನಿರ್ದೇಶಕರಾಗಿದ್ದ ಖ್ಯಾತ ರಂಗಕರ್ಮಿ ಇಬ್ರಾಹೀಂ ಅಲ್ಕಾಝಿ(94) ಅವರು ಮಂಗಳವಾರ ಇಲ್ಲಿ ನಿಧನರಾದರು.
ರಂಗಭೂಮಿ ಅಭಿಜ್ಞ,ಸಂಗ್ರಹಕಾರ ಮತ್ತು ಗ್ಯಾಲರಿ ಒಡೆಯರೂ ಆಗಿದ್ದ ಅಲ್ಕಾಝಿ ದಿಲ್ಲಿಯಲ್ಲಿ ಆರ್ಟ್ ಹೆರಿಟೇಜ್ ಗ್ಯಾಲರಿಯನ್ನು ಸ್ಥಾಪಿಸಿದ್ದರು.
ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ಸ್ ಆರ್ಟ್ನಲ್ಲಿ ರಂಗಶಿಕ್ಷಣ ಪಡೆದಿದ್ದ ಅವರು ತನ್ನ ವೃತ್ತಿಜೀವನದಲ್ಲಿ 50ಕ್ಕೂ ಅಧಿಕ ನಾಟಕಗಳನ್ನು ಪ್ರದರ್ಶಿಸಿದ್ದು, 1950ರಲ್ಲಿ ಬಿಬಿಸಿ ಬ್ರಾಡಕಾಸ್ಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ತುಘಲಕ್ (ಗಿರೀಶ್ ಕಾರ್ನಾಡ್), ಆಷಾಢ್ ಕಾ ಏಕ್ ದಿನ್ (ಮೋಹನ ರಾಕೇಶ್),ಅಂಧಾ ಯುಗ್ (ಧರ್ಮವೀರ ಭಾರ್ತಿ) ಇವು ಅಲ್ಕಾಝಿಯವರ ನಿರ್ದೇಶನದ ಪ್ರಮುಖ ನಾಟಕಗಳಲ್ಲಿ ಒಳಗೊಂಡಿದ್ದು,ಹಲವಾರು ಗ್ರೀಕ್ ದುರಂತ ಕಥೆಗಳು ಮತ್ತು ಶೇಕ್ಸ್ಪಿಯರ್ ಕೃತಿಗಳನ್ನೂ ಅವರು ರಂಗಕ್ಕೆ ತಂದಿದ್ದರು.
ಪದ್ಮವಿಭೂಷಣ(2010),ಪದ್ಮಭೂಷಣ(1991) ಮತ್ತು ಪದ್ಮಶ್ರೀ(1966) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಅವರು ಶಿಸ್ತುಬದ್ಧ ವ್ಯಕ್ತಿಯಾಗಿದ್ದು 1962-1977ರ ಅವಧಿಯಲ್ಲಿ ಎನ್ಎಸ್ಡಿ ನಿರ್ದೇಶಕರಾಗಿ ರಂಗ ತರಬೇತಿಗೆ ನೀಲನಕ್ಷೆಯನ್ನು ಒದಗಿಸಿದ್ದರು.
ನಾಸಿರುದ್ದೀನ್ ಶಾ, ಓಂ ಪುರಿ, ಉತ್ತರಾ ಬಾವೊಕರ್ ಮತ್ತು ರೋಹಿಣಿ ಹಟ್ಟಂಗಡಿ ಸೇರಿದಂತೆ ದೇಶದ ಕೆಲವು ಅತ್ಯುತ್ತಮ ನಟನಾ ಪ್ರತಿಭೆಗಳನ್ನು ತರಬೇತುಗೊಳಿಸಿದ್ದ ಅಲ್ಕಾಝಿ,ದೇಶದ ಹಲವಾರು ಪ್ರಮುಖ ರಂಗ ನಿರ್ದೇಶಕರಿಗೂ ತರಬೇತಿಯನ್ನು ನೀಡಿದ್ದರು. ಅವರ ಪತ್ನಿ ರೋಷನ್ ಅಲ್ಕಾಜಿ ಪತಿಯ ನಾಟಕಗಳಿಗೆ ವೇಷಭೂಷಣಗಳ ವಿನ್ಯಾಸವನ್ನು ನಿರ್ವಹಿಸುತ್ತಿದ್ದರು.
ಅಲ್ಕಾಝಿ ಅವರ ಇಬ್ಬರು ಮಕ್ಕಳೂ ರಂಗಕರ್ಮಿಗಳಾಗಿದ್ದಾರೆ.
ಪುತ್ರಿ ಅಮಲ್ ಅಲ್ಲಾನಾ ಅವರು ರಂಗ ನಿರ್ದೇಶಕಿಯಾಗಿದ್ದು,ಎನ್ಎಸ್ಡಿಯ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಪುತ್ರ ಫೈಸಲ್ ಅಲ್ಕಾಝಿ ಅವರೂ ರಂಗ ನಿರ್ದೇಶಕರಾಗಿದ್ದಾರೆ.
ಅಲ್ಕಾಝಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,‘ನಾಟಕಗಳನ್ನು ಜನಪ್ರಿಯಗೊಳಿಸುವಲ್ಲಿ ಮತ್ತು ನಾಟಕ ಕಲೆಯನ್ನು ದೇಶಾದ್ಯಂತ ತಲುಪಿಸುವಲ್ಲಿ ತನ್ನ ಪ್ರಯತ್ನಗಳಿಗಾಗಿ ಅಲ್ಕಾಝಿ ಸದಾ ನೆನಪಿನಲ್ಲಿರುತ್ತಾರೆ ’ಎಂದು ಟ್ವೀಟಿಸಿದ್ದಾರೆ.