ಕೋಮು ಪ್ರಚೋದನೆಯಿಂದ ದೂರವಿರಿ: ಪಾಕಿಸ್ತಾನಕ್ಕೆ ಭಾರತದ ಸಲಹೆ
ಹೊಸದಿಲ್ಲಿ, ಆ.6: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿರುವ ವಿಷಯದಲ್ಲಿ ಪಾಕಿಸ್ತಾನ ಮಾಡಿರುವ ಟೀಕೆಗಳನ್ನು ತಳ್ಳಿಹಾಕಿರುವ ಭಾರತ, ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ ಹಾಕದಂತೆ ಮತ್ತು ಕೋಮು ಪ್ರಚೋದನೆಯಿಂದ ದೂರವಿರುವಂತೆ ಪಾಕಿಸ್ತಾನಕ್ಕೆ ತಿಳಿಸಿದೆ.
ಭಾರತದ ಆಂತರಿಕ ವಿಷಯದ ಬಗ್ಗೆ ಪಾಕಿಸ್ತಾನದ ಇಸ್ಲಾಮಿಕ್ ರಿಪಬ್ಲಿಕ್ನ ಹೇಳಿಕೆಯನ್ನು ಗಮನಿಸಿದ್ದೇವೆ. ನಮ್ಮ ಆಂತರಿಕ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವುದರಿಂದ ಅಥವಾ ಕೋಮು ಪ್ರಚೋದನೆಯ ಪ್ರಯತ್ನದಿಂದ ಅವರು ದೂರವಿರಬೇಕು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ತಮ್ಮ ದೇಶದ ಅಲ್ಪಸಂಖ್ಯಾತರಿಗೆ ಧಾರ್ಮಿಕ ಹಕ್ಕನ್ನು ನಿರಾಕರಿಸುತ್ತಾ, ಗಡಿರೇಖೆಯಲ್ಲಿ ನಿರಂತರ ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಶದಿಂದ ಈ ರೀತಿಯ ಪ್ರತಿಕ್ರಿಯೆಯಲ್ಲಿ ಆಶ್ಚರ್ಯವೇನಿಲ್ಲ. ಆದರೆ ಇಂತಹ ಪ್ರತಿಕ್ರಿಯೆಗಳು ತೀವ್ರ ವಿಷಾದನೀಯವಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. ಬುಧವಾರ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವನ್ನು ಪಾಕಿಸ್ತಾನ ಟೀಕಿಸಿತ್ತು.