ಪದ್ಮಭೂಷಣ ಪುರಸ್ಕೃತ ವಿದ್ವಾಂಸರನ್ನು ‘ಬುದ್ಧಿಜೀವಿ ಜಿಹಾದಿ' ಎಂದ ಅಸ್ಸಾಂ ಬಿಜೆಪಿ ಶಾಸಕನ ವಿರುದ್ಧ ಹಲವು ಎಫ್ಐಆರ್
ಹೊಸದಿಲ್ಲಿ: ಖ್ಯಾತ ವಿದ್ವಾಂಸ ಹಾಗೂ ಅಸ್ಸಾಂ ಸಾಹಿತ್ಯ ಸಭಾದ ಮಾಜಿ ಅಧ್ಯಕ್ಷ ಸೈಯದ್ ಅಬ್ದುಲ್ ಮಲಿಕ್ ಅವರನ್ನು `ಬುದ್ಧಿಜೀವಿ ಜಿಹಾದಿ' ಎಂದ ಆರೋಪ ಎದುರಿಸುತ್ತಿರುವ ಅಸ್ಸಾಂನ ಹೊಜೈ ಕ್ಷೇತ್ರದ ಬಿಜೆಪಿ ಶಾಸಕ ಶಿಲಾದಿತ್ಯ ದೇವ್ ವಿರುದ್ಧ ಹಲವು ಎಫ್ಐಆರ್ಗಳು ದಾಖಲಾಗಿವೆ.
ಕಳೆದ ವಾರ ಅಸ್ಸಾಂ ರಾಜ್ಯದ ಖ್ಯಾತ ಹರಗೌರಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ದೇವ್ ತಮ್ಮ ವಿವಾದಿತ ಹೇಳಿಕೆ ನೀಡಿದ್ದರು. ಮಲಿಕ್ ಅವರು 2000ರಲ್ಲಿ ನಿಧನರಾಗಿದ್ದು ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ವಿಜೇತರಾಗಿದ್ದರು.
ತಮ್ಮ ಹೇಳಿಕೆಯ ಮೂಲಕ ಕೋಮು ಭಾವನೆಗಳನ್ನು ಕೆರಳಿಸುತ್ತಿದ್ದಾರೆಂದು ಆರೋಪಿಸಿ ಅಸ್ಸಾಂ ಕಾಂಗ್ರೆಸ್ ನ ಅಲ್ಪಸಂಖ್ಯಾತ ಘಟಕ ರವಿವಾರ ದೇವ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಆಲ್ ಅಸ್ಸಾಂ ಗೋರಿಯಾ-ಮೊರಿಯಾ-ದೇಶಿ ಜತಿಯಾ ಪರಿಷದ್, ಆಲ್ ಅಸ್ಸಾಂ ಗೋರಿಯಾ ಯುವ-ಛಾತ್ರ ಪರಿಷದ್ ಹಾಗೂ ಅಸ್ಸಾಂ ಸಂಗ್ರಾಮಿ ಯುವ ಮಂಚ್ ಕೂಡ ದೂರು ಸಲ್ಲಿಸಿವೆ.
ಅಖಿಲ ಅಸ್ಸಾಂ ವಿದ್ಯಾರ್ಥಿ ಯೂನಿಯನ್ ಹಾಗೂ ಅಸ್ಸಾಂ ಸಾಹಿತ್ಯ ಸಭಾ ಕೂಡ ಬಿಜೆಪಿ ಶಾಸಕನ ಹೇಳಿಕೆಯನ್ನು ಖಂಡಿಸಿವೆ.