ಲಾಕ್ ಡೌನ್ ವೇಳೆ ಮೃತಪಟ್ಟ ವಲಸೆ ಕಾರ್ಮಿಕರ ಕುರಿತ ಅಂಕಿಅಂಶ ಲಭ್ಯವಿಲ್ಲ ಎಂದ ಸರಕಾರ
ಹೊಸದಿಲ್ಲಿ: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಸಂದರ್ಭ ಊರುಗಳಿಗೆ ವಾಪಸಾಗುತ್ತಿದ್ದ ವೇಳೆ ಎಷ್ಟು ವಲಸಿಗ ಕಾರ್ಮಿಕರು ಮೃತಪಟ್ಟಿದ್ದಾರೆಂಬ ಕುರಿತ ಮಾಹಿತಿ ತನ್ನ ಬಳಿ ಇಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇಂದು ಸಂಸತ್ತಿಗೆ ತಿಳಿಸಿದೆ. ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸುವ ಪ್ರಶ್ನೆಯೂ ಏಳುವುದಿಲ್ಲ ಎಂದೂ ಸಚಿವಾಲಯ ಹೇಳಿದೆ.
ಈ ಕುರಿತಾದ ಪ್ರಶ್ನೆಯನ್ನು ಸದಸ್ಯರೊಬ್ಬರು ಕೇಳಿದ್ದರಲ್ಲದೆ ರಾಜ್ಯವಾರು ಮಾಹಿತಿಯನ್ನೂ ಲಭ್ಯವಿದ್ದರೆ ನೀಡುವಂತೆ ಕೋರಿದ್ದರು.
ಲಾಕ್ ಡೌನ್ ವೇಳೆ ವಲಸಿಗ ಕಾರ್ಮಿಕರು ಎದುರಿಸಬಹುದಾದ ಸಂಕಷ್ಟವನ್ನು ಅಂದಾಜಿಸಲು ಸರಕಾರ ವಿಫಲವಾಗಿತ್ತೇ ಎಂಬ ಕುರಿತಾದ ಇನ್ನೊಂದು ಪ್ರಶ್ನಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ , “ಕೋವಿಡ್ ಸಮಸ್ಯೆ ಹಾಗೂ ಲಾಕ್ ಡೌನ್ ನಿಂದಾಗಿ ಎದುರಾದ ಸಂಕಷ್ಟಗಳಿಗೆ ಕೇಂದ್ರ, ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಸರಕಾರೇತರ ಸಂಘಟನೆಗಳು ಸ್ಪಂದಿಸಿವೆ'' ಎಂದು ಹೇಳಿದರು.