ಬಿಜೆಪಿಯಿಂದ ಪ್ರಜಾಪ್ರಭುತ್ವದ ಕೊಲೆ: ಮಮತಾ ಬ್ಯಾನರ್ಜಿ ಆಕ್ರೋಶ
ಹೊಸದಿಲ್ಲಿ, ಸೆ.21: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗೆ ಧ್ವನಿಮತದ ಮೂಲಕ ಅಂಗೀಕಾರ ಪಡೆದ ಬಳಿಕ ಪ್ರತಿಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದು ನಂಬಲಾಗದ ಘಟನೆ. ರವಿವಾರ ರಾಜ್ಯಸಭೆಯಲ್ಲಿ ಕ್ರೂರ ರೀತಿಯಲ್ಲಿ ಪ್ರತಿಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲಾಗಿದೆ. ಇಡೀ ದೇಶವೇ ನರೇಂದ್ರ ಮೋದಿಯ ಸರ್ವಾಧಿಕಾರಕ್ಕೆ ಒಳಪಡುವ ಮುನ್ನ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ಪ್ರಜಾತಂತ್ರವಾದಿ ಭಾರತದ ಧ್ವನಿಯನ್ನು ಅಡಗಿಸುವ ಪ್ರಕ್ರಿಯೆ ಮುಂದುವರಿದಿದೆ. ಕರಾಳ ಕೃಷಿ ಮಸೂದೆಯನ್ನು ಜಾರಿಗೊಳಿಸುವ ಮೂಲಕ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದ ಜೊತೆಗೆ, ಸದನದಲ್ಲಿ ಪ್ರತಿಪಕ್ಷಗಳ ಸದಸ್ಯರ ಧ್ವನಿ ಅಡಗಿಸಿ ಅವರನ್ನು ಅಮಾನತುಗೊಳಿಸಿದ ಈ ‘ಸರ್ವಜ್ಞ’ ಸರಕಾರದ ಅಂತ್ಯವಿಲ್ಲದ ದಾರ್ಷ್ಟತನ ಇಡೀ ದೇಶವನ್ನು ಆರ್ಥಿಕ ವಿಪತ್ತಿಗೆ ತಳ್ಳಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿಯ ಭೂಪೇಂದ್ರ ಯಾದವ್, ಸದನದ ಆಸ್ತಿಗಳನ್ನು ಸಂಸದರು ಉದ್ದೇಶಪೂರ್ವಕವಾಗಿ ಧ್ವಂಸ ಮಾಡುತ್ತಿರುವ ಸಂದರ್ಭದಲ್ಲಿ ಮತ ವಿಭಜನೆ ಅಥವಾ ತಲೆ ಎಣಿಕೆ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ . ಪ್ರತಿಪಕ್ಷಗಳ ಗೂಂಡಾಗಿರಿ ಸದನದ ಒಳಗೂ ಪ್ರವೇಶಿಸಿರುವುದು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ನೈಜ ಬೆದರಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.