ಹತ್ರಸ್ ಅತ್ಯಾಚಾರ, ಸಾವು ಪ್ರಕರಣ: ಸಿಬಿಐ ತನಿಖೆಗೆ ಯುವತಿಯ ತಂದೆ ಆಗ್ರಹ
ಹೊಸದಿಲ್ಲಿ, ಅ. 1: ಉತ್ತರಪ್ರದೇಶದ ಹತ್ರಸ್ ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ತನಿಖೆ ಕುರಿತು ಅವರ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಆಗಿರುವ ವೀಡಿಯೊವೊಂದರಲ್ಲಿ ಯುವತಿಯ ತಂದೆ, ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಹಾಗೂ ಪ್ರಕರಣದ ಬಗ್ಗೆ ತನ್ನ ಕುಟುಂಬ ಮಾತನಾಡದಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವುದು ದಾಖಲಾಗಿದೆ.
‘‘ನಮಗೆ ತನಿಖೆ ಬಗ್ಗೆ ತೃಪ್ತಿ ಇಲ್ಲ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ನಾವು ಆಗ್ರಹಿಸುತ್ತೇವೆ. ಈಗ ನಮ್ಮ ಸಂಪೂರ್ಣ ಕುಟುಂಬ ಗೃಹ ಬಂಧನದಲ್ಲಿ ಇದೆ. ನಮ್ಮನ್ನು ಭೇಟಿಯಾಗಲು ಪತ್ರಕರ್ತರಿಗೆ ಕೂಡ ಅವಕಾಶ ನೀಡುತ್ತಿಲ್ಲ’’ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊದಲ್ಲಿ ಯುವತಿಯ ತಂದೆ ಹೇಳುತ್ತಿರುವುದು ಕಂಡು ಬಂದಿದೆ. ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಸ್ ಗೆ ಭೇಟಿ ನೀಡಿದ ದಿನವೇ ಯುವತಿಯ ತಂದೆಯ 1 ನಿಮಿಷದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ. ಕೊರೋನ ವೈರಸ್ ಸೋಂಕು ಹರಡುತ್ತಿದೆ ಎಂದಿರುವ ಜಿಲ್ಲಾಡಳಿತ ಹತ್ರಸ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಷೇಧಿಸಿದೆ. ಅಲ್ಲದೆ, ಮೃತಪಟ್ಟ ದಲಿತ ಯುವತಿಯ ಗ್ರಾಮಕ್ಕೆ ಪತ್ರಕರ್ತರು ಪ್ರವೇಶಿಸುವುದಕ್ಕೆ ನಿಷೇಧ ಹೇರಿದೆ.
ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ವೀಡಿಯೊ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಅನ್ಯಾಯದ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ಹತ್ರಸ್ ನ ಯುವತಿಯ ತಂದೆಯ ಹೇಳಿಕೆ ಕೇಳಿ. ಅವರು ತನಿಖೆ ಬಗ್ಗೆ ತೃಪ್ತಿ ಹೊಂದಿಲ್ಲ. ಈಗ ಇಡೀ ಕುಟುಂಬ ಗೃಹ ಬಂಧನದಲ್ಲಿ ಇದೆ. ಮಾತನಾಡುವುದನ್ನು ನಿಷೇಧಿಸಲಾಗಿದೆ. ಅವರನ್ನು ಬೆದರಿಸಿ ಮೌನವಾಗಿಸಲು ಸರಕಾರ ಪ್ರಯತ್ನಿಸುತ್ತಿದೆಯೇ? ಅನ್ಯಾಯದ ಮೇಲೆ ಅನ್ಯಾಯ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ‘‘’ಉತ್ತರಪ್ರದೇಶದ ನಿರ್ದಯ ಸರಕಾರ ಯುವತಿಯನ್ನು ಹತ್ಯೆಗೈದಿದೆ. ಅಲ್ಲದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ.