ಸರಗಳ್ಳರ ಬಂಧಿಸಲು ತೆರಳಿದವರ ಮೇಲೆ ಗುಂಪಿನ ದಾಳಿ
ಪೊಲೀಸರ ಮೇಲೆ ಕಲ್ಲೆಸೆತ; ಜೀವಂತ ದಹನಕ್ಕೆ ಯತ್ನ
ಕಲ್ಯಾಣ್, ಎ.10: ಪುಣೆಯ ಆ್ಯಂಬಿವ್ಯಾಲಿಯ ಕುಖ್ಯಾತ ಇರಾನಿ ಬಸ್ತಿಯಲ್ಲಿ ಸರ ಗಳ್ಳರ ಗುಂಪೊಂದನ್ನು ಬಂಧಿಸಲು ತೆರಳಿದ ಪೊಲೀಸ್ ತಂಡದ ಮೇಲೆ ಸರಗಳ್ಳರ ಕುಟುಂಬದವರು ದಾಳಿ ಮಾಡಿದ ಘಟನೆ ರವಿವಾರ ನಡೆದಿದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸುಮಾರು 25 ಮಂದಿಯ ತಂಡವು ಓರ್ವ ಪೊಲೀಸ್ ಸಿಬ್ಬಂದಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದೆ.
ಹಲವು ಪ್ರಕರಣಗಳಲ್ಲಿ ಶಾಮೀಲಾಗಿ, ಪೊಲೀಸರು ಹುಡುಕುತ್ತಿದ್ದ ಸಮೀರ್ ಇರಾನಿ ಮತ್ತು ಹಸನ್ ಇರಾನಿ ಎಂಬ ಇಬ್ಬರು ಸರಗಳ್ಳರು ಇರಾನಿ ಬಸ್ತಿಯಲ್ಲಿರುವ ತಮ್ಮ ಮನೆಯಲ್ಲಿ ಅಡಗಿದ್ದಾರೆ ಎಂಬ ಮಾಹಿತಿಯ ಮೇರೆಗೆ, ಉಲ್ಲಾಸ್ನಗರ ವಿಭಾಗದ ಡಿಸಿಪಿ ಸುನಿಲ್ ಭಾರದ್ವಾಜ್ ನೇತೃತ್ವದ ಸರಗಳ್ಳತನ ನಿಗ್ರಹ ದಳವು ಅವರನು್ನ ಬಂಧಿಸಲು ಇರಾನಿ ಬಸ್ತಿಗೆ ತೆರಳಿತ್ತು.
25 ಜನರಿದ್ದ ಪೊಲೀಸ್ ತಂಡ ಇಬ್ಬರೂ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿತ್ತು. ಆದರೆ ಅವರನ್ನು ಠಾಣೆಗೆ ಕರೆತರಲು ಮುಂದಾದಾಗ ಗುಂಪೊಂದು ಪೊಲೀಸರನ್ನು ತಡೆದು ಅವರೊಂದಿಗೆ ವಾಗ್ವಾದಕ್ಕೆ ತೊಡಗಿತು. ಅಲ್ಲದೆ ಪೊಲೀಸ್ ಸಿಬ್ಬಂದಿ ದಾಜಿ ಗಾಯಕ್ವಾಡ್ ಮೇಲೆ ಸೀಮೆ ಎಣ್ಣೆ ಸುರಿದು ಅವರನ್ನು ಜೀವಂತ ದಹಿಸಲು ಪ್ರಯತ್ನಿಸಿತು. ಈ ವೇಳೆ ಉಂಟಾದ ಗೊಂದಲದ ಲಾಭ ಪಡೆದ ಇಬ್ಬರೂ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗುಂಪಿನಿಂದ ಹಲ್ಲೆಗೆ ಒಳಗಾದ ಕಾನ್ಸ್ಟೆಬಲ್ ನೀಡಿದ ದೂರಿನ ಅನ್ವಯ 25 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ, ಸಮೀರ್ ಇರಾನಿ ನಿರ್ದೋಷಿ. ಜ್ವರದಿಂದ ಬಳಲಿ ಮನೆಯಲ್ಲಿ ಮಲಗಿದ್ದ ಆತನನ್ನು ಪೊಲೀಸರು ವಿನಾಕಾರಣ ಬಂಧಿಸಿ ಎಳೆದೊಯ್ಯಲು ಮುಂದಾದಾಗ ನಾವು ತಡೆದೆವು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಸಮೀರ್ ಬಂಧನ ವಿರೋಧಿಸಿ ಓರ್ವ ಮಹಿಳೆ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಪೊಲೀಸರು ಬೇರೆಯೇ ಕಥೆ ಕಟ್ಟಿದ್ದಾರೆ ಎಂದವರು ಹೇಳಿದ್ದಾರೆ.
‘ಸರಗಳ್ಳರ ಗ್ರಾಮ’ ಎಂದೇ ಕುಖ್ಯಾತಿ ಪಡೆದಿರುವ ಇರಾನಿ ಬಸ್ತಿಯಲ್ಲಿ ಪೊಲೀಸರ ಮೇಲೆ ಕಳೆದ 10 ವರ್ಷದಲ್ಲಿ ನಡೆಯುತ್ತಿರುವ ಎಂಟನೇ ಹಲ್ಲೆ ಘಟನೆ ಇದಾಗಿ ದೆ ಎಂದು ಪೊಲೀಸರು ತಿಳಿಸಿದ್ದಾರೆ.