ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದ ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಕಾರ್ಯಕರ್ತರು
ಹೀಗೊಂದು ಅಂಬೇಡ್ಕರ್ ಜಯಂತಿ !
ಬರೋಡ, ಎ.14: ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೆ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದ ದಲಿತ ಯುವಕನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗುಜರಾತ್ ನ ಬರೋಡದ ರೇಸ್ ಕೋರ್ಸ್ ರಸ್ತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಲಿತ ಯುವಕ ಹೂಹಾರ ಹಾಕಲು ಪ್ರತಿಮೆಯ ಮೇಲೇರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಆತನ ಮೇಲೆರಗಿದರು. ಆತನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದು ಹಾಕಿದರು. ಹಲ್ಲೆಗೊಳಗಾದ ಯುವಕನನ್ನು ಮಿತೇಶ್ ಪಾರ್ಮರ್ ಎಂದು ಗುರುತಿಸಲಾಗಿದೆ.
ಬರೋಡದ ಮೇಯರ್ ಮಾಲಾರ್ಪಣೆ ಮಾಡಿದ ಬಳಿಕವೇ ಇತರರು ಮಾಲಾರ್ಪಣೆ ಮಾಡಬಹುದು ಎಂದು ಹಠ ಹಿಡಿದ ಬಿಜೆಪಿ ಕಾರ್ಯಕರ್ತರು, ಮಾಲಾರ್ಪಣೆ ಮಾಡಲು ಹೋದ ಮಿತೇಶ್ ಗೆ ಮತ್ತೆ ಮತ್ತೆ ಕಾಲಲ್ಲಿ ತುಳಿದು ವೇದಿಕೆಯಿಂದ ಕೆಳಗೆಳೆದರು.
ಪೊಲೀಸರು ಹಲ್ಲೆಗೊಳಗಾದ ದಲಿತ ಯುವಕನನ್ನೇ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಅಲ್ಲಿ ಪ್ರಜ್ಞೆ ತಪ್ಪಿದ ಆತನನ್ನು ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರು.
Courtesy : divyabhaskar.co.in